ನಗರದಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಶಾಖೆ ವತಿಯಿಂದ ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ರಾಣಿಬೆನ್ನೂರು: ನಗರದಲ್ಲಿ ಕರ್ನಾಟಕ ಮಾದರ ಮಹಾಸಭಾ ತಾಲೂಕು ಶಾಖೆ ವತಿಯಿಂದ ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದರ ಸಮಾಜವು ಸುಮಾರು 35 ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಬಂದಿದೆ. ಕರ್ನಾಟಕ ಸರ್ಕಾರ ಒಳ ಮೀಸಲಾತಿ ವಿಷಯವಾಗಿ ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ನಿಗದಿಪಡಿಸಿ ಸಂಪುಟದಲ್ಲಿ ತೀರ್ಮಾನಿಸಿತ್ತು. ಆದರೆ ಅದನ್ನು ಸಂವಿಧಾನದ 9ನೇ ಷಡ್ಯೂಲ್‌ನಲ್ಲಿ ಸೇರಿಸಿ ಅನುಷ್ಠಾನಗೊಳಿಸಬೇಕಾಗಿತ್ತು. ಹಾಗೆ ಮಾಡದ ಕಾರಣ ಸುಪ್ರೀಂ ಕೋರ್ಟ್ ಆದೇಶದಂತೆ ಯಾವುದೇ ಮೀಸಲಾತಿಯು ಶೇ.50 ಮೀರಿರಬಾರದು ಎಂದು ನಿರ್ದೇಶನ ನೀಡಿರುವುದರಿಂದ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಶೇ. 24ರಷ್ಟು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹಿಂದಿನ ಪ್ರಕಾರ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3ರಂತೆ ಒಳ ಮೀಸಲಾತಿಯನ್ನು ಅವರವರ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿ ರಾಜ್ಯ ಸರ್ಕಾರ ಸಂಪುಟದಲ್ಲಿ 56432 ಸರ್ಕಾರಿ ಹುದ್ದೆಗಳನ್ನು ತುಂಬುವ ತರಾತುರಿಯಲ್ಲಿದೆ. ಈ ನಿಟ್ಟಿನಲ್ಲಿ ಒಳ ಮೀಸಲಾತಿಯನ್ನು ಅಳವಡಿಸಿ ಸರ್ಕಾರದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕ ಮಾದರ ಮಹಾಸಭಾ ಅಧ್ಯಕ್ಷ ಮೈಲಪ್ಪ ಗೋಣಿಬಸಮ್ಮನವರ, ಮಂಜಪ್ಪ ಬಿ.ಎಚ್., ಲಕ್ಷ್ಮಣ ಗುಡಿಹಿಂದ್ಲರ, ರಘು ಆಡೂರ, ನೀಲಕಂಠಪ್ಪ ಹಾದೇರ, ದೊಣ್ಣೆಪ್ಪ ದೊಡ್ಮನಿ, ನೀಲಕಂಠಪ್ಪ ಕುಸಗೂರ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಪೂಜಾರ, ಮಲ್ಲೇಶಪ್ಪ ಮೆಣಸಿನಹಾಳ, ಮೈಲಪ್ಪ ದಾಸಪ್ಪನವರ, ಹನುಮಂತಪ್ಪ ಕಬ್ಬಾರ, ಹೊನ್ನಪ್ಪ ದೊಡ್ಮನಿ, ಶ್ರೀಕಾಂತ ಸಣ್ಣಮನಿ, ದುರುಗಪ್ಪ ಕರೆಜ್ಜಿ, ಶಾಂತಪ್ಪ ಹಲವಾಗಲ, ಕೊಟ್ರೇಶ ಅಣ್ಣೇರ, ಮೈಲಪ್ಪ ಹನಮಜ್ಜೆರ, ಹನುಮಂತಪ್ಪ ವರವಜ್ಜಿ, ಸಂಜೀವ ಮಸಿಯಪ್ಪನವರ ಮತ್ತಿತರರಿದ್ದರು.