ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪರಿಸರ ನಾಶ ಮಾಡಿದರೆ ಮುಂದೆ ಕ್ರಮೇಣ ಮನುಕುಲದ ನಾಶವಾಗಲಿದೆ ಎಂದು ಶ್ರವಣಬೆಳಗೊಳ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಶ್ರವಣಬೆಳಗೊಳದ ಬಾಹುಬಲಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಗುರುವಾರ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರ, ಗಿಡ, ಕಲ್ಲು, ಮಣ್ಣು, ನದಿ ಹೀಗೆ ಪ್ರಕೃತಿಯನ್ನು ಆರಾಧಿಸುವ ದೇಶ ಭಾರತ. ನಮ್ಮ ಪೂರ್ವಜರು ಪರಿಸರಕ್ಕೆ ದೈವತ್ವ ಹಾಗೂ ಪೂಜನೀಯ ಸ್ಥಾನ ನೀಡಿದ್ದರು. ಮನುಷ್ಯ ನಿರ್ಮಾಣ ಮಾಡಲು ಸಾಧ್ಯವಾಗದ ಪ್ರತಿಯೊಂದು ವಸ್ತುವೂ ಪರಿಸರವಾಗಿದ್ದು, ಆಧುನಿಕತೆಯ ಭರಾಟೆಯಲ್ಲಿ ಇಂದು ಮನು? ಈ ಪರಿಸರವನ್ನು ನಾಶ ಮಾಡುತ್ತಿರುವುದು ವಿಷಾದನೀಯ. ಮುಂದಿನ ಪೀಳಿಗೆಗೆ ಬದುಕಲು ಅತ್ಯವಶ್ಯಕವಾದ ಉತ್ತಮ ಗಾಳಿ, ನೀರು ದೊರೆಯಬೇಕಾದರೆ ಪರಿಸರ ರಕ್ಷಣೆ ಹಾಗೂ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್ ಮಾತನಾಡಿ, ಪರಿಸರ ದಿನಾಚರಣೆ ಎಂದರೆ ಕೇವಲ ಒಂದು ದಿನ ಆಚರಿಸುವ ಆಚರಣೆಯಲ್ಲ. ಪ್ರತಿದಿನವೂ ಪರಿಸರದ ಕುರಿತು ಜವಾಬ್ದಾರಿಯಿಂದ ನಡೆದುಕೊಳ್ಳುವುದು ನಿಜವಾದ ದಿನಾಚರಣೆ. ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಫ್ತಾಬ್ ಪಾಷ ಮಾತನಾಡಿ, ನಮ್ಮ ಮನೆಯನ್ನು ಸ್ವಚ್ಛಗೊಳಿಸುವಂತೆ ನಮ್ಮ ಬೀದಿ, ಗ್ರಾಮವನ್ನು ಶುಚಿಯಾಗಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರೂ ಗ್ರಾಮ ಪಂಚಾಯ್ತಿಯೊಂದಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಯಶಸ್ ಜೈನ್, ಪಿಎಸ್ಐ ನವೀನ್ ಕುಮಾರ್, ಶ್ರೀಮಠದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್ ಕುಮಾರ್, ಸದಸ್ಯ ಹೇಮಂತ್ ಕುಮಾರ್, ಕಾರ್ಯದರ್ಶಿ ಎಸ್.ಪಿ.ಮಹೇಶ್, ಬಾಹುಬಲಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಬಬನ್ ಪಾರಿಸ ದತವಾಡೆ, ಪ್ರಾಂಶುಪಾಲರಾದ ಡಾ. ಸುನಿಲ್ ಕುಮಾರ್, ಡಾ. ಎಸ್.ದಿನೇಶ್, ಕೃಷಿ ಇಲಾಖೆ ಸಿಬ್ಬಂದಿ ಅರ್ಪಿತಾ ಮುಂತಾದವರಿದ್ದರು.