ಕನ್ನಡಪ್ರಭವಾರ್ತೆ ಅರಸೀಕೆರೆ
ವ್ಯಕ್ತಿಯ ಬದುಕಿನಲ್ಲಿ ಸಂಸ್ಕಾರ, ಜ್ಞಾನ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ಶಕ್ತಿ ಶಿಕ್ಷಣಕ್ಕಿದೆ. ಆದ್ದರಿಂದ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಬಲವಾದ ಅಡಿಪಾಯವಾಗಬೇಕು ಎಂದು ಯಳನಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಹೇಳಿದರು.ನಗರದ ವಿವೇಕಾನಂದ ಬಿಎಡ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘಗಳು ಮತ್ತು ವಿವಿಧ ಸಮಿತಿಗಳ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮನುಷ್ಯನು ಸಮಾಜಮುಖಿ ಜೀವಿಯಾಗಿದ್ದು, ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಅಳವಡಿಸಿಕೊಳ್ಳಲು ಶಿಕ್ಷಣ ಅಗತ್ಯವಾಗಿದೆ. ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶಮಯ ಬದುಕು ನಡೆಸಿದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ವಿವೇಕಾನಂದ ಬಿಎಡ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದೇ ಹಾದಿಯಲ್ಲಿ ಹೊಸದಾಗಿ ದಾಖಲಾದ ಪ್ರಶಿಕ್ಷಣಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಕಲ್ಮುರುಡೇಶ್ವರ ತಪೋವನದ ಕರಡಿ ಗವಿ ಮಹಾಸಂಸ್ಥಾನದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕಾಲೇಜಿನಲ್ಲಿ ಕನ್ನಡ, ವಿಜ್ಞಾನ, ಗ್ರಂಥಾಲಯ, ಕ್ರೀಡೆ, ನ್ಯಾಕ್ ಹಾಗೂ ಶಿಸ್ತು ಪಾಲನೆ ಸೇರಿದಂತೆ ವಿವಿಧ ಸಂಘಗಳು ಮತ್ತು ಸಮಿತಿಗಳನ್ನು ರಚಿಸಿರುವುದು ಶ್ಲಾಘನೀಯ ಎಂದರು.
ಆಧುನಿಕ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ತಕ್ಕಮಟ್ಟಿನ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ. ಶಿಕ್ಷಣದ ನೆರವಿನಿಂದ ಪರಿಪಕ್ವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಿ. ಕುಡವಕ್ಕಲಗಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ವಿಷಯಾಧಾರಿತ ಕಲಿಕೆ ಜೊತೆಗೆ ಸಂಘ–ಸಮಿತಿಗಳ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಸರ್ವಾಂಗೀಣ ಬೆಳವಣಿಗೆ ಸಾಧಿಸಬೇಕು ಎಂದು ತಿಳಿಸಿದರು.
ಪ್ರಾಧ್ಯಾಪಕ ಪ್ರೊ. ಕೆಂಪರಾಜ್ ಮಾತನಾಡಿ, ವಿದ್ಯೆ ವಿನಯವನ್ನು ತಂದುಕೊಡಬೇಕು. ಸಾರ್ಥಕ ಬದುಕಿಗೆ ಶಿಕ್ಷಣವೇ ಪ್ರಮುಖ ಸಾಧನವಾಗಿದ್ದು, ಕಲಿಕೆಗೆ ಅಂತ್ಯವಿಲ್ಲ ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ವ್ಯಕ್ತಿತ್ವ ವಿಕಸನ ವೇದಿಕೆಯ ಸಂಚಾಲಕಿ ಡಾ. ಮಾಲಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಜಯ ಎಸ್. ಅಗಡಿ, ಡಾ. ಬಸವರಾಜು, ಶೇಖರ್, ಗ್ರಂಥಪಾಲಕ ವಿಜಯಕುಮಾರ್, ಕಚೇರಿ ಮುಖ್ಯಸ್ಥ ಬಿ.ಆರ್. ಶಶಿಧರ್, ರೇಖಾ, ಬಸಣ್ಣ ಸೇರಿದಂತೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.