ಕನ್ನಡಪ್ರಭ ವಾರ್ತೆ ಕೋಲಾರಬೇಸಿಗೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಜಲಜೀವನ್ ಮಿಷನ್ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಪಂ ಸಿಷೊಓ ಡಾ.ಪ್ರವೀಣ್ ಪಿ.ಬಾಗೇವಾಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಪಂ ಸಭಾಂಗಣದಲ್ಲಿ ಪಿಡಿಒಗಳು ಹಾಗೂ ಆಡಳಿತಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೋಲಾರ ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿನ ನೀರಿನ ಲಭ್ಯತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅಮ್ಮನಲ್ಲೂರು ಮತ್ತು ರಾಮಪುರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ, ನೀರಿನ ಸಮಸ್ಯೆ ಎದುರಾಗದಂತೆ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಬಾಡಿಗೆಗೆ ಪಡೆಯಲು ಸೂಚಿಸಲಾಯಿತು.

ವಡಗೇರಿ ಮತ್ತು ಚೌಡದೇನಹಳ್ಳಿ ಇಲ್ಲಿನ ಹಳೆಯ ಬೋರ್‌ವೆಲ್‌ಗಳಲ್ಲಿ ಇಳುವರಿ ಕಡಿಮೆಯಾಗಿದ್ದು, ಹೊಸ ಬೋರ್‌ವೆಲ್ ಕೊರೆಯುವ ಪ್ರಸ್ತಾವನೆ ಹಾಗೂ ರೈತರ ಬೋರ್‌ವೆಲ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಪಿಡಿಒಗಳು ಮಾಹಿತಿ ನೀಡಿದರು.ವಿಫಲವಾದ ಬೋರ್‌ವೆಲ್‌ಗಳ ಬದಲಿಗೆ ತಕ್ಷಣವೇ ಹೊಸ ಪಾಯಿಂಟ್ ಗುರುತಿಸಿ ನೀರಿನ ವ್ಯವಸ್ಥೆ ಮಾಡಲು ಸಿಇಒ ಸೂಚಿಸಿದರು. ಜೆಜೆಎಂ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿರುವ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ ಸಿಇಒ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅನೇಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಟಿಸಿ ಇಲ್ಲದ ಕಾರಣ ನೀರು ಸರಬರಾಜು ಸ್ಥಗಿತಗೊಂಡಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.ಜಿಲ್ಲೆಯ ಒಟ್ಟು ಕೆರೆಗಳ ಪೈಕಿ ೧೭೩ ಕೆರೆಗಳ ಒತ್ತುವರಿ ತೆರವು ಬಾಕಿ ಇದ್ದು, ರಾಜಸ್ವ ಇಲಾಖೆ ಮತ್ತು ಡಿಡಿಎಲ್‌ಆರ್ ಸಹಯೋಗದೊಂದಿಗೆ ಕೂಡಲೇ ತೆರವು ಕಾರ್ಯಾಚರಣೆ ನಡೆಸಲು ಆದೇಶಿಸಲಾಯಿತು. ಕೆರೆಗಳ ಸ್ವರೂಪ ಹಾಳಾಗದಂತೆ ಸುತ್ತಲೂ ಟ್ರೆಂಚ್ ಹೊಡೆಯಲು ಹಾಗೂ ಒತ್ತುವರಿ ಜಾಗದಲ್ಲಿನ ಬೆಳೆಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಯಿತು.

ಸಭೆಯಲ್ಲಿ ಎಸಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಜಿಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಡಿಡಿಎಲ್‌ಆರ್ ಸಂಜಯ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರಮೇಶ್ ಇದ್ದರು.