ಹಾವೇರಿ: ವಿದ್ಯೆಯು ಕಳ್ಳರಿಂದ ಕದಿಯಲ್ಪಡುವುದಿಲ್ಲ, ಅಣ್ಣ ತಮ್ಮಂದಿರು ಹಾಗೂ ಅಕ್ಕತಂಗಿಯರಲ್ಲಿ ಹಂಚಲ್ಪಡುವುದಿಲ್ಲ, ಬಳಸಿದಂತೆ ವೃದ್ಧಿಯಾಗುವ, ತೆರಿಗೆ ರಹಿತ ಸಂಪತ್ತು ಯಾವುದಾದರೂ ಇದ್ದರೆ ಅದು ವಿದ್ಯೆ ಮಾತ್ರ ಎಂದು ಗೌರಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಕ್ಷರಾಭ್ಯಾಸ, ಸರಸ್ವತಿ ಪೂಜಾ ಸಂಭ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿದ್ಯೆಯು ಸರ್ವ ಶ್ರೇಷ್ಠ ಸಂಪತ್ತಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರಕ್ಕೆ ಬಹಳ ಮಹತ್ವವಿದೆ. ಸಂಸ್ಕಾರದಿಂದ ವ್ಯಕ್ತಿಗೆ ಅಥವಾ ವಸ್ತುವಿಗೆ ಶ್ರೇಷ್ಠತೆ ಬರುತ್ತದೆ. ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅಕ್ಕಿಯಾಗುತ್ತದೆ, ಅಕ್ಕಿಗೆ ಸಂಸ್ಕಾರ ಕೊಟ್ಟರೆ ಅನ್ನವಾಗುತ್ತದೆ. ಅನ್ನಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಗುತ್ತದೆ. ಪ್ರಸಾದ ಸ್ವೀಕರಿಸಿದರೆ ಮನಸ್ಸು ಪ್ರಸನ್ನವಾಗುತ್ತದೆ. ವಿದ್ಯೆಯು ರೂಪವನ್ನು, ಭೋಗ ಯಶಸ್ಸನ್ನು ಕರುಣಿಸುತ್ತದೆ. ಅದು ಗುಪ್ತ ಧನವಿದ್ದಂತೆ. ಆದ್ದರಿಂದ ವಿದ್ಯೆಯು ಗುರುವಿಗೆ ಗುರು ಇದ್ದಂತೆ ಎಂದರು. ಚುಟುಕು ಸಾಹಿತ್ಯ ಪರಿತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ ಮಾತನಾಡಿ, ಶ್ರೀಮಠದ ಶಾಲೆ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣದಲ್ಲಿ ಮುಂದಿದ್ದು, ಶ್ರೀಗಳು ಹಾಗೂ ಸಿಬ್ಬಂದಿ ವರ್ಗದ ನಿರಂತರ ಕಠಿಣ ಪರಿಶ್ರಮದ ಫಲ ಪ್ರಸಕ್ತ ವರ್ಷ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನೂರಕ್ಕೆ ನೂರು ಆಗಿದೆ ಎಂದರು.

ವೇದಮೂರ್ತಿ ಶಂಕ್ರಯ್ಯ ಶಾಸ್ತ್ರೀಗಳವರಿಂದ ಶ್ರೀ ವಿಘ್ನ ನಿವಾರಕ ಗಣಪತಿಯ ಹಾಗೂ ವಿದ್ಯಾ ದೇವತೆ ಸರಸ್ವತಿಯ ಪೂಜೆ ಜರುಗಿತು. ನಂತರ ಶ್ರೀಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಮುಖ್ಯೋಪಾಧ್ಯಾಯ ಶಂಕರ ಅಕ್ಕಸಾಲಿ ಸ್ವಾಗತಿಸಿದರು. ಶಿಕ್ಷಕಿ ರಶ್ಮಿ ಕುಲಕರ್ಣಿ ಪ್ರಾರ್ಥಿಸಿದರು. ಪೂಜಾ ಮಹಾರಾಜಪೇಟ ನಿರೂಪಿಸಿದರು. ಗೌರಮ್ಮ ಲೋಕಾಪುರ ವಂದಿಸಿದರು.