ವಿದ್ಯೆ ನಮ್ಮನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆ

| Published : Feb 01 2025, 12:48 AM IST

ಸಾರಾಂಶ

ಶಿವಮೊಗ್ಗ : ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆಯೋ ಅದೇ ವಿದ್ಯೆ. ವಿದ್ಯೆಯ ವಿಧಾನ ಭಾರತೀಯವಾಗಿರಬೇಕು ಎಂದು ಶ್ರೀ ಕ್ಷೇತ್ರ ಕೂಡಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಮಹಾಸ್ವಾಮೀಜಿ ಹೇಳಿದರು.

ಶಿವಮೊಗ್ಗ : ಯಾವುದು ನಮ್ಮನ್ನು ಮುಕ್ತಿಯ ಕಡೆಗೆ ಕೊಂಡೊಯ್ಯುತ್ತದೆಯೋ ಅದೇ ವಿದ್ಯೆ. ವಿದ್ಯೆಯ ವಿಧಾನ ಭಾರತೀಯವಾಗಿರಬೇಕು ಎಂದು ಶ್ರೀ ಕ್ಷೇತ್ರ ಕೂಡಲಿ ಮಹಾಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಮಹಾಸ್ವಾಮೀಜಿ ಹೇಳಿದರು.

ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ ಎಬಿವಿಪಿಯಿಂದ 3 ದಿನಗಳ ಕಾಲ ಹಮ್ಮಿಕೊಂಡಿರುವ ಕರ್ನಾಟಕ ದಕ್ಷಿಣ ಪ್ರಾಂತದ 44ನೇ ಸಮ್ಮೇಳನದಲ್ಲಿ ಪ್ರದರ್ಶಿನಿಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ನಾನು ಮಾಡುತ್ತಿದ್ದೇನೆ. ನಾನು ಮಾಡಿದ ಕಾರ್ಯಕ್ಕೆ ಫಲಬೇಕು ಎನ್ನುವ ಅಪೇಕ್ಷೆ ಅದುಸ್ವಾರ್ಥವಾಗುತ್ತದೆ. ನಾನು ಅಡಿಗೆ ಮಾಡಿದ್ದನ್ನು ಎಲ್ಲರಿಗೂ ಹಂಚಿ ತಿನ್ನಬೇಕು. ಬಹುಪಾಲು ಇತರರಿಗೆ ನೀಡಬೇಕು ಎನ್ನುವ ಭಾವನೆ ಇದ್ದರೆ ಅದು ಆತನ ಮುಂದಿನ ಭವಿಷ್ಯಕ್ಕೆ ಒಳ್ಳೆಯ ಫಲ ನೀಡುತ್ತದೆ. ಸಮಷ್ಠಿ ರೂಪದಲ್ಲಿ ಒಂದು ಧರ್ಮ ಇರಬೇಕು ಅನ್ನುತ್ತೇವೆ. ಎಲ್ಲರ ಪೋಷಣೆಯೇ ಸಮಷ್ಠಿ ಧರ್ಮದ ಲಕ್ಷಣ ಎಂದರು.ಪ್ರತಿಯೊಬ್ಬ ಗೃಹಸ್ಥ ಜೀವಿತಾವಧಿಯಲ್ಲಿ 5 ಯಜ್ಞಗಳನ್ನು ಮಾಡಬೇಕು. ದೇವತೆಗಳ ಆರಾಧನೆಯ ಮೂಲಕ ಸೇವೆಯ ಮೂಲಕ ದೇವತಾ ಯಜ್ಞ, ನಂತರ ಪಿತೃ ಯಜ್ಞ, ಭೂತ ಯಜ್ಞ, ಮನುಷ್ಯ ಯಜ್ಞ ಕೊನೆಯದಾಗಿ ಬ್ರಹ್ಮ ಯಜ್ಞ ಮಾಡಬೇಕು. ನಾವುಗಳಿಸಿದ್ದನ್ನು ಇತರರಿಗೆ ಹಂಚುವುದು, ನಾವು ಕಲಿತದ್ದನ್ನು ಇತರರಿಗೆ ನೀಡುವುದು ಎಲ್ಲವನ್ನೂ ಯಜ್ಞ ಎಂದು ಭಾವಿಸಿ ಬಾಳಬೇಕು ಎಂದರು.ವಿದ್ಯಾರ್ಥಿ ಪರಿಷತ್ ಇವೆಲ್ಲವನ್ನೂ ವಿದ್ಯಾರ್ಥಿ ಜೀವನದಲ್ಲೇ ಹೇಳಿ ಕೊಡುತ್ತದೆ. ಮನುಷ್ಯ ಇವೆಲ್ಲವನ್ನೂ ತಿರಸ್ಕಾರ ಮಾಡುತ್ತಾ ಬಂದಾಗ ನಾನಾ ರೀತಿಯ ವಿಕೋಪಗಳು ಸಂಭವಿಸುತ್ತವೆ. ಪ್ರಾಕೃತಿಕ ವಿಕೋಪಗಳಾಗುತ್ತವೆ. ಈಗಿನ ಶಿಕ್ಷಣದಲ್ಲಿ ಗುಣಮಟ್ಟದ ಕೊರತೆಯಾಗುತ್ತಿದೆ. ಈ ಐದು ಯಜ್ಞಗಳನ್ನು ಅಳವಡಿಸುವುದರಿಂದ ಮತ್ತು ಗೃಹಸ್ಥಾಶ್ರಮದಲ್ಲಿ ಇದನ್ನು ಪಾಲನೆ ಮಾಡುವುದರಿಂದ ಜೀವನದಲ್ಲಿ ಯಶಸ್ಸಿನೊಂದಿಗೆ ರಾಷ್ಟ್ರಸೇವೆ ಮಾಡಿದಂತಾಗುತ್ತದೆ ಎಂದರು.ವೇದಿಕೆಯಲ್ಲಿ ಡಾ.ಸತೀಶ್, ರಾಜ್ಯ ಕಾರ್ಯದರ್ಶಿ ಪ್ರವೀಣ್, ಪ್ರಮುಖರಾದ ಡಾ.ಪಿ.ವಿ.ಕೃಷ್ಣಭಟ್, ಕೆ.ಎಸ್.ಈಶ್ವರಪ್ಪ, ಗಿರೀಶ್ ಪಟೇಲ್, ಕೆ.ಈ.ಕಾಂತೇಶ್, ವಿಎಚ್‌ಪಿ ಜಿಲ್ಲಾಧ್ಯಕ್ಷ ವಾಸುದೇವ್, ಬಾಲಕೃಷ್ಣ ಎಸ್., ಡಾ.ರವಿಕಿರಣ್, ದಿವೇಕರ್, ವಕೀಲ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮೊದಲಾದವರಿದ್ದರು.