ಜೈವಿಕ ತಂತ್ರಜ್ಞಾನ ವಲಯ, ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯವನ್ನು ಉತ್ತೇಜಿಸಲು ಶಿವಮೊಗ್ಗದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜೈವಿಕ ತಂತ್ರಜ್ಞಾನ ವಲಯ, ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯವನ್ನು ಉತ್ತೇಜಿಸಲು ಶಿವಮೊಗ್ಗದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಚೇರಿಗೆ ಆಗಮಿಸಿದ್ದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ, ಎಫ್ಕೆಸಿಸಿಐ ಕೋರ್ ಕಮಿಟಿಯ ಮಾಹಿತಿ ತಂತ್ರಜ್ಞಾನ ಸಮಿತಿಯ ಶಮಂತ್ ನೆಲ್ಲಿಕೆರೆ ಮತ್ತು ಗೋಪಿಕ ಪಿಲ್ಲೈ ಅವರನ್ನು ಸ್ವಾಗತಿಸಿ ಸಭೆಯಲ್ಲಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಲಭ್ಯವಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಶಿವಮೊಗ್ಗ ನಗರದಲ್ಲಿ ನಾವೀನ್ಯತೆ, ತಂತ್ರಜ್ಞಾನ, ವ್ಯವಹಾರ ಸಂಶೋಧನೆ ಮತ್ತು ಅಭಿವೃದ್ಧಿ ಇನ್ಕುಬೇಟರ್, ಶಿಕ್ಷಣ ಮತ್ತು ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ಹೆಚ್ಚಿನ ಹೂಡಿಕೆ ಅವಕಾಶಗಳು ಮತ್ತು ಉದ್ಯೋಗಾವಕಾಶವನ್ನು ಸರ್ಕಾರದ ಮಟ್ಟದಿಂದ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.ಶಿವಮೊಗ್ಗವನ್ನು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮೂಲಕ ಪ್ರಮುಖ ತಂತ್ರಜ್ಞಾನ ಮತ್ತು ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಸ್ಟಾರ್ಟ್ಅಪ್, ಕೃಷಿ, ತಂತ್ರಜ್ಞಾನ ಸೇರಿದಂತೆ ಹಲವು ಅವಕಾಶಗಳು ಇಲ್ಲಿದೆ. ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸಲು ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ, ಸಬ್ಸಿಡಿಗಳು, ಬಾಡಿಗೆ ಬೆಂಬಲದಂತಹ ಪ್ರೋತ್ಸಾಹಕದ ಅವಶ್ಯಕತೆಯಿದೆ. ಶಿವಮೊಗ್ಗದಂತಹ ನಗರಗಳಿಗೆ ಸ್ಥಳಾಂತರಗೊಳ್ಳುವ ಅಥವಾ ಪ್ರಾರಂಭವಾಗುವ ಕಂಪನಿಗಳಿಗೆ ಕರ್ನಾಟಕ ಸರ್ಕಾರವು ಸರ್ಕಾರಿ ಪ್ರೋತ್ಸಾಹ ಧನ ಮತ್ತು ಬೆಂಬಲ ಗಮನಾರ್ಹ ಸವಲತ್ತುಗಳನ್ನು ನೀಡಬೇಕು ಎಂದರು.
ಶಿವಮೊಗ್ಗದಂತಹ ನಗರಗಳನ್ನು ತಂತ್ರಜ್ಞಾನ ವಾಣಿಜ್ಯದ ಕೇಂದ್ರಗಳಾಗಿ ಪರಿವರ್ತಿಸುವುದು. ಬೆಂಗಳೂರಿನ ಮೇಲಿನ ಹೊರೆ ಕಡಿಮೆ ಮಾಡುವುದು ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಬೆಳೆಸುವುದು ಬೆಂಗಳೂರಿನಾಚೆ ಕಾರ್ಯಕ್ರಮದ ಗುರಿಯಾಗಿದೆ. ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಬೆಳವಣಿಗೆಗೆ ಅನುಕೂಲವಾಗುವ ವಿತರಣಾ ಐಟಿ/ಐಟಿಇಎಸ್ ಮಾದರಿಯನ್ನು ಸಕ್ರಿಯಗೊಳಿಸುವತ್ತ ಗಮನಹರಿಸಿ ಸರ್ಕಾರವು ಹೊಸ ಐಟಿ ನೀತಿಯನ್ನು ಮುಂಚೂಣಿಗೆ ತಂದಿದೆ ಎಂದರು.ಬೆಂಗಳೂರಿನಾಚೆಗೆ ಉಪಕ್ರಮವು ತಂತ್ರಜ್ಞಾನ ಮತ್ತು ನಾವೀನ್ಯತೆ ಸಂಬಂಧಿತ ಚಟುವಟಿಕೆಯನ್ನು ಇತರ ನಗರಗಳಿಗೆ ಸ್ಥಳಾಂತರಿಸುವ ಸರ್ಕಾರದ ಪ್ರಸ್ತುತ ಪ್ರಯತ್ನಗಳಿಗೆ ಬೆಂಬಲ ಮತ್ತು ಎಲ್ಲ ರೀತಿಯ ಸಹಕಾರ ನೀಡಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಬದ್ಧವಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಎಸ್.ಎಸ್.ಉದಯ್ ಕುಮಾರ್, ವಸಂತ್ ಹೋಬಳಿದಾರ್, ಎಸ್.ಪಿ.ಶಂಕರ್, ಜಿ.ವಿ.ಕಿರಣ್ ಕುಮಾರ್, ರವಿಪ್ರಕಾಶ್ ಜೆನ್ನಿ, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ ಭಾಗವಹಿಸಿದ್ದರು.