ತಾಲೂಕು ಅಭಿವೃದ್ಧಿಗಾಗಿ ಕೈಗಾರಿಕಾ ವಲಯ ಸ್ಥಾಪನೆ

| Published : Jun 05 2025, 02:20 AM IST

ಸಾರಾಂಶ

ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ೧೨೭೩ ಎಕರೆ ಜಮೀನನ್ನು ಕೈಗಾರಿಕಾ ವಲಯಕ್ಕೆ ಗುರುತಿಸಲಾಗಿದೆ, ಈ ಪೈಕಿ ೫೫೧ ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕೆ, ಬೇಡವೇ ಎಂಬ ಬಗ್ಗೆ ರೈತರಿಂದ ಆಕ್ಷೇಪಣೆ ಸ್ವೀಕರಿಸಲು ನೋಟಿಸ್ ನೀಡಲಾಗಿತ್ತು

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಯದರೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಇದರಿಂದ ಯಾವ ರೈತರಿಗೂ ಅನ್ಯಾಯ ಆಗುವುದಿಲ್ಲ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಯದರೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಕುರಿತಾಗಿ ರೈತರಿಂದ ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸುವ ಮುನ್ನ ನಡೆದ ಸಭೆಯಲ್ಲಿ ಮಾತನಾಡಿ, ತಾವು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳಿಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ.ಇದೆಲ್ಲವೂ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.

೧೨೭೩ ಎಕರೆ ಜಮೀನ ಅಗತ್ಯ

ಕೆಎಐಡಿಬಿ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಮಾತನಾಡಿ, ಕಂದಾಯ ವ್ಯಾಪ್ತಿಯಲ್ಲಿ ಗ್ರಾಮದ ಸಮೀಪ ೧೨೭೩ ಎಕರೆ ಜಮೀನನ್ನು ಕೈಗಾರಿಕಾ ವಲಯಕ್ಕೆ ಗುರುತಿಸಲಾಗಿದೆ, ಈ ಪೈಕಿ ೫೫೧ ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕೆ, ಬೇಡವೇ ಎಂಬ ಬಗ್ಗೆ ರೈತರಿಂದ ಆಕ್ಷೇಪಣೆ ಸ್ವೀಕರಿಸಲು ನೋಟಿಸ್ ನೀಡಲಾಗಿತ್ತು, ಅದರಂತೆ ಕೆಎಐಡಿಬಿ ಇಲಾಖೆಯ ವಿಶೇಷ ಭೂ ಸ್ವಾಧಿನಾಧಿಕಾರಿ ಸಭೆ ನಡೆಸುತ್ತಿರುವುದಾಗಿ ಹೇಳಿದರು. ಶಾಸಕ ವೆಂಕಟಶಿವಾರೆಡ್ಡಿ ಕೈಗಾರಿಕೆಗಳ ಸ್ಥಾಪಿಸಿ ಅದರಿಂದ ಈ ಭಾಗದ ಜನರಿಗೆ ಏನೆಲ್ಲಾ ಅನಕೂಲ ಆಗಬೇಕು ಎಂಬ ವಿಚಾರದಲ್ಲಿ ಬಹಳ ಉತ್ಸುಕರರಾಗಿದ್ದಾರೆ ಇದಕ್ಕಾಗಿ ಪ್ರತಿ ಹಂತದಲ್ಲೂ ಒತ್ತಡ ಹೇರುತ್ತಿದ್ದಾರೆ, ಸರ್ಕಾರದ ನಿಯಮಾವಳಿಗಳಂತೆ ಕ್ರಮಕೈಗೊಳ್ಳಲಾಗಿದ್ದು, ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.ಭೂ ಸ್ವಾಧೀನಕ್ಕೆ ವಿರೋಧ

ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕ ರೈತ ಸಂಘದ ಜಿಲ್ಲಾ ಮುಖಂಡ ಸೂರ್ಯನಾರ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಕೆ.ಕೆ.ಮಂಜುನಾಥ್, ಬ್ಯಾಟಪ್ಪ, ನವೀನ್‌ಕುಮಾರ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿ ಬಹುತೇಕ ರೈತರಿಗೆ ನೋಟಿಸ್ ಜಾರಿಯಾಗಿಲ್ಲ, ಇನ್ನು ೧೦ ದಿನಗಳ ಕಾಲ ಕಾಲಾವಕಾಶ ಬೇಕಿದೆ ಎಂದು ಒತ್ತಾಯಿಸಿ ಲಿಖಿತ ಮನವಿ ಸಲ್ಲಿಸಿದರು.ಇದಕ್ಕೆ ಉತ್ತರಿಸಿದ ಆಕ್ಷೇಪ ಸ್ವೀಕರಿಸುತ್ತಿದ್ದ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಯವರು, ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತು ಮಾಡಲಾಗಿದೆ, ಆದರೆ ಇನ್ನು ನೋಟೀಫಿಕೇಶನ್ ಆಗಿಲ್ಲ. ಈಗಾಗಲೇ ನೋಟಿಸ್ ನೀಡಲಾಗಿರುವ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು, ಯಾರಿಗೆ ನೋಟಿಸ್ ಸಿಕ್ಕಿಲ್ಲವೊ ಅವರಿಂದ ೧೦ ದಿನಗಳ ನಂತರ ಆಕ್ಷೇಪಣೆ ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು . ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹೊರಗಿನವರು ಬಂದು ವಿನಾಕಾರಣ ಗೊಂದಲ ಸೃಷ್ಠಿಸುತ್ತಿದ್ದಾರೆ ಅವರ ಒತ್ತಡಕ್ಕೆ ಮಣಿಯಬೇಡಿ ಎಂದು ಗ್ರಾಮದ ಕೆಲ ಯುವ ಮುಖಂಡರು ಅಗ್ರಹಿಸಿದರು,

ನಮಗೆ ಕೈಗಾರಿಕೆಗಳು ಬೇಕು

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ಇದು ನಮ್ಮೂರಿನ ಸಮಸ್ಯೆ. ನಾವು ಬಗೆಹರಿಸಿಕೊಳ್ಳುತ್ತೇವೆ. ಹೊರಗಿನ ವ್ಯಕ್ತಿಗಳಿಗೇನು ಇಲ್ಲಿ ಕೆಲಸ ನಮಗೆ ಕೈಗಾರಿಕೆಗಳು ಬೇಕು, ಇದರಿಂದ ನಮ್ಮ ಯುವಕರಿಗೆ ಅವರ ವಿದ್ಯಾಹರ್ತೆಗೆ ಅನುಗುಣವಾಗಿ ಮನೆ ಹತ್ತಿರ ಕೆಲಸ ಸಿಗುತ್ತದೆ ನಮ್ಮ ಅಭಿಪ್ರಾಯ ಪಡೆದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದರು.ಪೊಲೀಸರ ಮಧ್ಯಪ್ರವೇಶ

ಯದರೂರು ಗ್ರಾಮದ ಪ್ರದೀಪ್ ವೆಂಕಟೇಶ್ ಗೌಡ, ರಹಮತುಲ್ಲಾ ಮುಂತಾದವರು ಧ್ವನಿ ಗೂಡಿಸಿದರು. ಇದರಿಂದಾಗಿ ಸ್ಥಳದಲ್ಲಿ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು, ಎರಡೂ ಕಡೆಯವರು ಪರ ವಿರೋಧ ಘೋಷಣೆಗಳನ್ನು ಕೂಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೆಲವರು ಆಕ್ಷೇಪ ಸ್ವೀಕಾರ ಸಭೆಗೆ ಅಡ್ಡಿಪಡಿಸಿ ಸಭೆ ಸ್ಥಗಿತಗೊಳಿಸಿದರು, ಈ ಸಂದರ್ಭದಲ್ಲಿ ಪ್ರತಿಭಟಿಸುತ್ತಿದ್ದ ವ್ಯಕ್ತಿಗಳನ್ನು ಕೆಎಐಡಿಬಿ ವಿಶೇಷ ಭೂಸ್ವಾಧಿನಾಧಿಕಾರಿ ಕರೆಯಿಸಿ, ಮನವೊಲಿಸಿದ ನಂತರ ರೈತರು ಅಭಿಪ್ರಾಯ ಲಿಖಿತವಾಗಿ ನೀಡಿದರು.