ಆರ್‌ಸಿಬಿ ತಂಡದ ಗೆಲುವಿಗೆ ಪ್ರಾರ್ಥಿಸಿ ಅಭಿಮಾನಿಗಳ ಪೂಜೆ

| Published : Jun 03 2025, 12:07 AM IST

ಸಾರಾಂಶ

ಜಿಲ್ಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಜೋಶ್ ಜೋರಾಗಿದ್ದು, ಎಲ್ಲೆಡೆ ಬ್ಯಾನರ್, ಬಂಟಿಂಗ್ಸ್‌ ಹಾಕಿ ಆರ್‌ಸಿಬಿ ತಂಡದ ಗೆಲುವಿಗಾಗಿ ಶುಭಾಶಯಗಳನ್ನು ಕೋರಿದ್ದಾರೆ.

ಹಾವೇರಿ: ಈ ಸಲ ಕಪ್‌ ನಮ್ದೇ ಎಂದು 17 ಆವೃತ್ತಿಗಳಿಂದ ಹೇಳಿಕೊಳ್ಳುತ್ತಲೇ ಬಂದಿದ್ದ ಐಪಿಎಲ್‌ನ ಆರ್‌ಸಿಬಿ ಫ್ಯಾನ್ಸ್‌ ಈ ಸಲ ಫೈನಲ್‌ಗೆ ತಂಡ ತಲುಪಿರುವುದಕ್ಕೆ ಭಾರೀ ಸಂಭ್ರಮದಲ್ಲಿದ್ದಾರೆ. ಐಪಿಎಲ್ ಸಿಜನ್- 18ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಿದ್ದು, ಮಂಗಳವಾರದ ಪಂದ್ಯ ವೀಕ್ಷಿಸಲು ಕಾತರರಾಗಿದ್ದಾರೆ.

ಜಿಲ್ಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಜೋಶ್ ಜೋರಾಗಿದ್ದು, ಎಲ್ಲೆಡೆ ಬ್ಯಾನರ್, ಬಂಟಿಂಗ್ಸ್‌ ಹಾಕಿ ಆರ್‌ಸಿಬಿ ತಂಡದ ಗೆಲುವಿಗಾಗಿ ಶುಭಾಶಯಗಳನ್ನು ಕೋರಿದ್ದಾರೆ. ಇನ್ನು ಫೈನಲ್ ಪಂದ್ಯ ವೀಕ್ಷಣೆಗಾಗಿ ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಮೈದಾನ, ರಾಣಿಬೆನ್ನೂರು ನಗರದ ತಾಲೂಕು ಕ್ರೀಡಾಂಗಣ, ಹಾನಗಲ್ಲ ಪಟ್ಟಣದ ಕನಕ ವೃತ್ತ ಸೇರಿದಂತೆ ಜಿಲ್ಲೆಯ ವಿವಿಧಡೆ ಬೃಹತ್ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ಜಿಲ್ಲೆಯ ಬಟ್ಟೆ ಅಂಗಡಿಗಳಲ್ಲಿ ಆರ್‌ಸಿಬಿ ಜರ್ಸಿಗಳಿಗೆ ಬೇಡಿಕೆ ಬಂದಿದ್ದು, ಕ್ರೀಡಾಭಿಮಾನಿಗಳು ಆರ್‌ಸಿಬಿ ಜೆರ್ಸಿಗಳನ್ನು ಖರೀದಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಬಹುವರ್ಷಗಳ ಕನಸು ಸಾಕಾರಗೊಳ್ಳುವ ಸಮಯ ಬಂದಿದ್ದು, ಈ ಬಾರಿಯ ಫೈನಲ್ ಪಂದ್ಯಾವಳಿಯಲ್ಲಿ ಶತಾಯಗತಾಯ ಗೆಲುವು ಸಾಧಿಸಲೆಂದು ಕ್ರೀಡಾಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲು ತಯಾರಿ ನಡೆಸಿದ್ದಾರೆ.ತಾಲೂಕಿನ ಯಲಗಚ್ಚ ಗ್ರಾಮದ ಪುನೀತ್‌ರಾಜಕುಮಾರ ದೇವಸ್ಥಾನದಲ್ಲಿ ಕ್ರೀಡಾಭಿಮಾನಿಗಳು ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.

ಮಂಗಳವಾರದ ಪಂದ್ಯ ವೀಕ್ಷಣೆಗೂ ಮುನ್ನ ಕೇಕ್‌ ಕತ್ತರಿಸಿ ಶುಭ ಕೋರಲೆಂದು ಎರಡು ದಿನಗಳಿಂದ ಬೇಕರಿಗಳಲ್ಲಿ ಕೇಕ್‌ ಆರ್ಡರ್‌ ನೀಡುತ್ತಿದ್ದಾರೆ. ಎಲ್ಲೆಡೆ ಆರ್‌ಸಿಬಿ ಪರ ಅಲೆ ಎದ್ದಿದ್ದು, ಯುವ ಜನತೆ ಭಾರಿ ಸಂಭ್ರಮಕ್ಕೆ ಸಿದ್ಧರಾಗುತ್ತಿದ್ದಾರೆ. ಜಿ.ಎಚ್. ಕಾಲೇಜಿನಲ್ಲಿ ಪ್ರಥಮ ಚಿಕಿತ್ಸಾ ಜಾಗೃತಿ

ಹಾವೇರಿ: ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಪ್ರಥಮ ಚಿಕಿತ್ಸಾ ಜಾಗೃತಿ ಕುರಿತು ಕಾರ್ಯಾಗಾರ ನಡೆಯಿತು.

ರೆಡ್‌ಕ್ರಾಸ್‌ನ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ನೀಲೇಶ್ ಎಂ.ಎನ್., ಸಹ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಖಜಾಂಚಿ ಪ್ರಭು ಹಿಟ್ನಳ್ಳಿ, ಸದಸ್ಯರಾದ ಉಡಚಪ್ಪ ದುಳಗಿ, ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಂಕಿತ್ ಆನಂದ, ಡಾ. ಮಂಜುನಾಥ ಪಿ., ಇರ್ಷಾದ್ ಅಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜೆ.ಎಫ್. ಹೊಸಮನಿ ವಹಿಸಿದ್ದರು. ವೈಆರ್‌ಸಿ ಅಧಿಕಾರಿ ಡಾ. ಚೇತನಾ ಎಂ. ಸ್ವಾಗತಿಸಿದರು. ಡಾ. ಅಶ್ವಿನಿ ಹತ್ತಿಕಾಳ ವಂದಿಸಿದರು. ಸೋಮಣ್ಣ ಡಂಬರಮತ್ತೂರು ನಿರ್ವಹಿಸಿದರು.