ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹುಲಿ ಜಮೀನಿನಲ್ಲಿದೆ ಎಂದು ಹೇಳಿದ ನಂತರವೂ ವಿಳಂಬವಾಗಿ ಬಂದ ಅರಣ್ಯ ಸಿಬ್ಬಂದಿಯನ್ನು ಆಕ್ರೋಶಗೊಂಡ ಹಲವು ರೈತರು ಹುಲಿ ಸೆರೆಗೆ ಇಡಲಾಗಿದ್ದ ಬೋನಿಗೆ ಕೂಡಿ ಹಾಕಿದ ಘಟನೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ನಡೆದಿದೆ.ಬೊಮ್ಮಲಾಪುರ ಗಂಗಪ್ಪಗೆ ಸೇರಿದ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ಹುಲಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಹುಲಿ ಇದೆ ಬೇಗ ಬರುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಕೆಲ ರೈತರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೇ ಇಬ್ಬರು ಡಿಆರ್ಎಫ್ಒ, ಎಡಿಎಸ್ ಹಾಗೂ ಗಾರ್ಡ್ಗಳು ಸೇರಿದಂತೆ ಏಳು ಮಂದಿ ಗಂಗಪ್ಪ ಜಮೀನಿಗೆ ಹೋಗುವಷ್ಟರಲ್ಲಿ ಆಕ್ರೋಶಗೊಂಡ ರೈತರು ಗಂಗಪ್ಪ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ ಏಳು ಅರಣ್ಯ ಸಿಬ್ಬಂದಿಯನ್ನು ನುಗ್ಗಿಸಿ ಲಾಕ್ ಮಾಡಿದ್ದಾರೆ.ಬೋನಿಗೆ ಅರಣ್ಯ ಸಿಬ್ಬಂದಿ ಕೂಡಿ ಹಾಕಿದ್ದಾರೆಂಬ ವಿಷಯ ತಿಳಿದ ಕೊಡಸೋಗೆ ಗ್ರಾಪಂ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಶಿವಪ್ರಸಾದ್ ಆಲಿಯಾಸ್ ಗುಂಡಣ್ಣ ಕೂಡಿ ಹಾಕಿದ್ದ ರೈತರಿಗೆ ಮಾತನಾಡಿ ಬೋನಿನಿಂದ ಬಿಡಿಸಿದ್ದರು ಎಂದು ಪ್ರತ್ಯೇಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ಅರಣ್ಯ ಸಿಬ್ಬಂದಿ ಬೋನಿಗೆ ಕೂಡಿ ಹಾಕಿರುವ ವಿಷಯ ಅರಿತ ಗುಂಡ್ಲುಪೇಟೆ ಎಸಿಎಫ್ ಕೆ.ಸುರೇಶ್, ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಎನ್.ಜಯಕುಮಾರ್ ಜೊತೆ ಸ್ಥಳಕ್ಕಾಗಮಿಸಿದಾಗ ರೈತರು ಹಾಗು ಅರಣ್ಯ ಇಲಾಖೆ ಅಧಿಕಾರಿಗಳ ಮಾತಿನ ಚಕಮಕಿ ನಡೆಯಿತು.
ಈ ಸಮಯದಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಇಡಲಾಗಿದ್ದ ಬೋನಿನ ಬಳಿ ಕಟ್ಟಿದ್ದ ಹಸು ಸತ್ತು ಹೋಗಿದೆ, ಹುಲಿ ಸೆರೆಗೆ ಇಲಾಖೆ ಬೇಜವಬ್ದಾರಿ ತನ ಎದ್ದು ಕಾಣುತ್ತಿದೆ. ಹಾಗಾಗಿ ಸಿಬ್ಬಂದಿ ಕೂಡಿ ಹಾಕಿದ್ದೇವೆ ಎಂದು ರೈತರು ಸಮಜಾಯಿಸಿ ನೀಡಿದ್ದಾರೆ ಎನ್ನಲಾಗಿದೆ.ಗುಂಡ್ಲುಪೇಟೆ ಎಸಿಎಫ್ ಕೆ.ಸುರೇಶ್ ಮಾತನಾಡಿ, ಹುಲಿ ಹಾವಳಿ ತಡೆಗೆ ನಾಳೆಯಿಂದ ಸಾಕಾನೆ ಮೂಲಕ ಕೂಂಬಿಂಗ್ ನಡೆಸಲಾಗುತ್ತದೆ ಎಂದು ರೈತರ ಮನವೊಲಿಸಿದ್ದಾರೆ.
ಸ್ಥಳಕ್ಕಾಗಮಿಸಿದ ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಕೂಡಿ ಹಾಕಿದ ರೈತರ ಮೇಲೆ ಕೇಸು ದಾಖಲಿಸಿದರೆ ರೈತರು ಕೂಡ ಕೇಸು ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.ಸಿಬ್ಬಂದಿಯಲ್ಲಿ ಹೆಚ್ಚಿದ ಆತಂಕ?
ಗುಂಡ್ಲುಪೇಟೆ: ಹುಲಿ ಬಂದಿದೆ ಎಂಬ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಸ್ಥಳಕ್ಕೇ ಹೋದರೆ ಕೆಲ ರೈತರು ಹಿಡಿದು ಬೋನಿಗೆ ಹಾಕಿದ್ದ ಬಗ್ಗೆ ಅರಣ್ಯ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ.ಬೊಮ್ಮಲಾಪುದ ಬಳಿ ಹುಲಿ ಇದೆ ಎಂಬ ಮಾಹಿತಿ ಮೇರೆಗೆ ಹೋದ ಏಳು ಮಂದಿ ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಮಂಗಳವಾರ ಕೆಲ ರೈತರು 20 ನಿಮಿಷಗಳ ಕಾಲ ಕೂಡಿ ಹಾಕಿದ್ದರು. ಇದು ಅರಣ್ಯ ಸಿಬ್ಬಂದಿಯಲ್ಲಿ ಆತಂಕದ ಜೊತೆಗೆ ಅರಣ್ಯ ಇಲಾಖೆ ಮೇಲಾಧಿಕಾರಿಗಳ ಮೇಲೆ ಅಸಮದಾನಕ್ಕೂ ಕಾರಣವಾಗಿದೆ ಎನ್ನಲಾಗುತ್ತಿದೆ.
೯ಜಿಪಿಟಿ೪ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಬಳಿ ಅರಣ್ಯ ಸಿಬ್ಬಂದಿಯನ್ನು ಬೋನಿಗೆ ಕೂಡಿ ಹಾಕಿದ್ದ ಕೆಲ ರೈತರು.
೯ಜಿಪಿಟಿ೫ಅರಣ್ಯ ಸಿಬ್ಬಂದಿ ಕೂಡಿ ಹಾಕಿದ್ದ ಸ್ಥಳಕ್ಕೆ ಎಸಿಎಫ್ ಕೆ.ಸುರೇಶ್, ನವೀನ್ ಕುಮಾರ್ ಭೇಟಿ ನೀಡಿದ್ದರು.