ಕನ್ನಡಪ್ರಭ ವಾರ್ತೆಮೈಸೂರು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಇಂತಹ ಸಾಂಸ್ಕೃತಿಕ ವೇದಿಕೆಗಳು ಅಗತ್ಯ ಎಂದು ಸೆಂಟ್ ಥಾಮಸ್ ಎಜುಕೇಶನ್ ಸೊಸೈಟಿ ಮಾಜಿ ಅಧ್ಯಕ್ಷ ಫಾ. ಡಾ. ಆಗಸ್ಟಿನ್ ತಿಳಿಸಿದರು.ಶ್ರೀರಾಂಪುರದ ಕ್ರೈಸ್ಟ್ ಕಾಲೇಜಿಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಸಾಂಸ್ಕೃತಿಕ ಹಬ್ಬ ಫಿಯೆಸ್ಟಾ 2ಕೆ26- ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯನ್ನು ಶ್ರೇಷ್ಠತೆಯ ಕೇಂದ್ರವಾಗಿ ರೂಪಿಸುವಲ್ಲಿ ಎದುರಾದ ಸವಾಲುಗಳನ್ನು ಅವರು ಉಲ್ಲೇಖಿಸಿ, ಮೌಲ್ಯಾಧಾರಿತ ಶಿಕ್ಷಣದ ಅಗತ್ಯ ಹೆಚ್ಚಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸೆಂಟ್ ಥಾಮಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಫಾ. ಜೋಬಿ ಕುನ್ನತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ಕಾಪಾಡಿಕೊಂಡು ಶ್ರೇಷ್ಠತೆಯತ್ತ ಮುನ್ನಡೆಯಬೇಕು. ಅಲ್ಲದೆ, ‘ವಸುದೈವ ಕುಟುಂಬಕಂ’ ಎಂಬ ಮಾತಿನಂತೆ ವೇದಗಳು ಮತ್ತು ಉಪನಿಷತ್ತುಗಳ ಮಹತ್ವವನ್ನು ವಿವರಿಸಿದರು.ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯ ನಡೆಸಿಕೊಟ್ಟರು. ಬಳಿಕ ಗಣ್ಯರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿದರು. ಕಾಲೇಜಿನ ಪ್ರಾಂಶುಪಾಲ ಫಾ. ಜಿಂಟೋ ಜೋಸ್ ಅವರು ಸ್ವಾಗತ ಭಾಷಣದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯ ಬೆಳವಣಿಗೆ ಮತ್ತು ದೃಷ್ಟಿಕೋನವನ್ನು ವಿವರಿಸಿದರು.ಪೋಷಕರ ಪರವಾಗಿ ರವಿ ಹುಲ್ಕೋಟಿ ಮಾತನಾಡಿ, ಸಂಸ್ಥೆಯ ಪ್ರಗತಿ ಮತ್ತು ವಿದ್ಯಾರ್ಥಿಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕಾಲೇಜಿನ ವ್ಯೂ ಬುಕ್ ಬಿಡುಗಡೆಗೊಳಿಸಲಾಯಿತು. ನಂತರ ಗಣ್ಯರು, ಕ್ರೈಸ್ಟ್ ಮೀಡಿಯಾ ಸಂಯೋಜಕಿ ಎಸ್‌. ಶಿಲ್ಪಾ ಮತ್ತು ವಿದ್ಯಾರ್ಥಿ ಸಂಯೋಜಕಿ ಎಂ.ಎನ್‌. ಅನುಷಾ ಹಾಗೂ ಜೆಜ್ನೀಲ್ ಲೋಮಿಯೋ ಅವರು ಕ್ರಿಸ್ಟೋಸ್ ವಾರ್ಷಿಕ ವಿಶೇಷ ಸಂಚಿಕೆ ಅನಾವರಣಗೊಳಿಸಿದರು.ಕಾಲೇಜಿನ ಶೈಕ್ಷಣಿಕ ಸಾಧನೆ ಪರಿಚಯಿಸುವ ವಿಡಿಯೋ ಪ್ರದರ್ಶನ ಹಾಗೂ ಕಳೆದ ದಶಕದಲ್ಲಿ ಸಂಸ್ಥೆಗೆ ಮಹತ್ವದ ಕೊಡುಗೆ ನೀಡಿದ ಮಹನೀಯರಿಗೆ ಸಮರ್ಪಿತ ವಿಶೇಷ ವಿಡಿಯೋ ಕೂಡ ಪ್ರದರ್ಶಿಸಲಾಯಿತು.ಶೈಕ್ಷಣಿಕ ಹಾಗೂ ಪಾಠ್ಯೇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಭಾಗ ಮಟ್ಟದ ಟಾಪರ್‌ಗಳನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಹೊಸ ಚೈತನ್ಯ ನೀಡಿದವು. ಕಾಲೇಜು ಗಾಯಕ ವೃಂದದ ಸಂಗೀತ ಕಾರ್ಯಕ್ರಮದ ಬಳಿಕ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ನೀಡಿದ ನೃತ್ಯ ಪ್ರದರ್ಶನ ಸೃಜನಶೀಲತೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸಿತು.-------------------eom/mys/dnm/