ಸಾರಾಂಶ
ತಾಲೂಕಿನ ಶಿವಪುರ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಕಲ್ಲೀಗೌಡನಹಳ್ಳಿ ಗ್ರಾಮದ ಗೌಡಿಕೆ ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು.
ಗುಂಡ್ಲುಪೇಟೆ: ತಾಲೂಕಿನ ಶಿವಪುರ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಕಲ್ಲೀಗೌಡನಹಳ್ಳಿ ಗ್ರಾಮದ ಗೌಡಿಕೆ ಸಿದ್ದರಾಜು ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷ, ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿದ್ದರಾಜು ನಾಮಪತ್ರ ಸಲ್ಲಿಸಿದ್ದರು.
ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇತರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ರಂಗನಾಥ್ ನೂತನ ಅಧ್ಯಕ್ಷರಾಗಿ ಗೌಡಿಕೆ ಸಿದ್ದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಈ ವೇಳೆ ಗ್ರಾಪಂ ನಿರ್ಗಮಿತ ಅಧ್ಯಕ್ಷ ಶಿವಪುರ ಮಹದೇವಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಎಸ್.ಜಗದೀಶ್ ಮೂರ್ತಿ, ಎಪಿಎಂಸಿ ಉಪಾಧ್ಯಕ್ಷ ರಾಜು, ಮುಖಂಡರಾದ ಶಿವಕಂಠ ಮೂರ್ತಿ, ಶಿವಪ್ಪ, ರವೀಂದ್ರ,ಮರಿ ಬಸಪ್ಪ,ಶಿವನಂಜಪ್ಪ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.ನುಡಿದಂತೆ ನಡೆದ ಶಿವಪುರ ಮಹದೇವಪ್ಪ!ಗುಂಡ್ಲುಪೇಟೆ: ಶಿವಪುರ ಗ್ರಾಪಂ ಅಧ್ಯಕ್ಷರಾಗಿದ್ದ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ರೈತ ಸಂಘದ ಒಳ ಒಪ್ಪಂದಂತೆ ರಾಜೀನಾಮೆ ಸಲ್ಲಿಸಿ ನುಡಿದಂತೆ ನಡೆದುಕೊಂಡಿದ್ದಾರೆ. ಗ್ರಾಪಂ, ಪಿಎಲ್ಡಿ ಬ್ಯಾಂಕ್, ಪುರಸಭೆ ಅಧ್ಯಕ್ಷ ಸ್ಥಾನ ಯಾವುದೇ ಇರಲಿ, ಅಧ್ಯಕ್ಷ ಸ್ಥಾನಕ್ಕೆ ಏರುವ ಮುನ್ನ ಪಕ್ಷದ ಒಳ ಒಪ್ಪಂದಂತೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸಿ ರಾಜೀನಾಮೆ ಕೊಟ್ಟಿದ್ದಾರೆ ಇನ್ನು ಕೆಲವರು ರಾಜೀನಾಮೆ ನೀಡದೆ ಇರುವವರು ಇದ್ದಾರೆ.
ಈ ಸಮಯದಲ್ಲಿ ಶಿವಪುರ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶಿವಪುರ ಮಹದೇವಪ್ಪ ರೈತಸಂಘ,ಕಾಂಗ್ರೆಸ್ ಪಕ್ಷದ ಒಳ ಒಪ್ಪಂದಂತೆ ಅವಧಿಗೂ ಮುನ್ನ ರಾಜೀನಾಮೆ ಸಲ್ಲಿಸಿ, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ನುಡಿದಂತೆ ನಡೆದ ಅಧ್ಯಕ್ಷ ಎನಿಸಿಕೊಂಡಿದ್ದಾರೆ.