ಕನ್ನಡಪ್ರಭ ವಾರ್ತೆ ಪಾವಗಡ
ಅಲೆಮಾರಿ ಸಮುದಾಯಗಳ ಸರ್ವತ್ತೋಭಿವೃದ್ದಿಗೆ, ಶಿಕ್ಷಣ ಅಗತ್ಯ ಅಗತ್ಯವಾಗಿದ್ದು ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಪ್ರಗತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಹೇಳಿದರು. ಶನಿವಾರ ಪಟ್ಟಣದ ಆಫ್ ಬಂಡೆ ಯಲ್ಲಿ ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಇಲ್ಲಿನ ಅಲೆಮಾರಿ ಸಮುದಾಯದ ಜನರಿಂದ ವಸತಿ ಹಾಗೂ ಇತರೆ ಮೂಲಭೂತ ಸಮಸ್ಯೆಗಳ ಅಹವಾಲುಗಳು ಸಲ್ಲಿಸಿದ್ದು ಸ್ವೀಕರಿಸಲಾಗಿದೆ. ಸರ್ಕಾರ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿ ಅಲೆಮಾರಿಗಳ ಅಭಿವೃದ್ಧಿಗಾಗಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಅಲೆಮಾರಿ ಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಪಡೆಯುವುದು ಬಹುಮುಖ್ಯವಾಗಿದೆ ಎಂದರು. ಅಲೆಮಾರಿ ಅಭಿವೃದ್ಧಿ ನಿಗಮದ ಸೌಲಭ್ಯಗಳ ಬಗ್ಗೆ ಮಾಹಿತಿ ಹಾಗೂ ಹೆಚ್ಚು ಅನುಕೂಲ ಪಡೆಯಲು ಮತ್ತು ಸಮಸ್ಯೆಗಳನ್ನು ತಿಳಿಯಲು ಈ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂದರು. ಅಲೆಮಾರಿಗಳ ಅಭಿವೃದ್ಧಿಗಾಗಿ ಪಕ್ಷಾತೀತ,ನಿಷ್ಪಕ್ಷಪಾತವಾಗಿ ಅಲೆಮಾರಿ ಸಮುದಾಯಗಳಿಗೆ ನೇರವಾಗಿ ಸರ್ಕಾರಿ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಆಶ್ವಾಸನೆ ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಕಾರ್ಡ್ ಮತ್ತು ಅಂಬೇಡ್ಕರ್ ಸಹಾಯಹಸ್ತ ಕಾರ್ಡ್ಗಳ ತಾಲೂಕುವಾರು ಪ್ರಗತಿ ಕುರಿತು ಅಧಿಕಾರಿಗಳಿಂದ ವಿವರ ಪಡೆದ ಅವರು, ಅಲೆಮಾರಿ ಅಭಿವೃದ್ಧಿ ನಿಗಮದಿಂದ ತಾಲೂಕಿಗೆ ಬಂದಿರುವ ನಿವೇಶನಗಳ ಸಂಖ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಧಾರ್ ಕಾರ್ಡ್,ಪಡಿತರ ಚೀಟಿ, ಹಾಗೂ ಜಾತಿ ಪ್ರಮಾಣ ಪತ್ರ ಇಲ್ಲದ ಅಲೆಮಾರಿ ಜನರನ್ನು ಶೀಘ್ರವಾಗಿ ಗುರುತಿಸಿ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು.
ಈ ವೇಳೆ ವಿಮುಕ್ತ ಬುಡಕಟ್ಟು ಒಕ್ಕೂಟದ ಜಂಟಿ ನಿರ್ದೇಶಕ ಏಕಲವ್ಯ ಆನಂದ್,ಪುರಸಭೆ ಮುಖ್ಯ ಅಧಿಕಾರಿ ಜಾಫರ್ ಷರೀಫ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ,ಸೊಗಡು ವೆಂಕಟೇಶ್, ಸಿಪಿಡಿಒ ಸುನಿತಾ, ಸಮಾಜ ಕಲ್ಯಾಣ ಇಲಾಖೆಯ ಎ.ಡಿ.ದಿನೇಶ್,ತಾಪಂ ಇಒ ಮಧುಸೂದನ್, ಕಂದಾಯ ಅಧಿಕಾರಿ ರಾಜಗೋಪಾಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.