- ಬಿಜೆಪಿ ಆರೋಪಕ್ಕೆ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಜುಬೇದ ಸ್ಪಷ್ಟನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಪಟ್ಟಣ ಪಂಚಾಯಿತಿ ನಗರೋತ್ತಾನ ವೈಯಕ್ತಿಕ ಫಲಾನುಭವಿಗಳ ಅನುದಾನ 2025 ರ ಡಿಸೆಂಬರ್ 2 ರಂದು ಮಂಜೂ ರಾಗಿದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದ ಸ್ಪಷ್ಟನೆ ನೀಡಿದರು.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷರ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಪಟ್ಟಣದ 465 ಫಲಾನುಭವಿಗಳಿಗೆ ವೈಯ್ಯಕ್ತಿಕ ಅನುದಾನ ನೀಡಲು ₹77 ಲಕ್ಷ ಮಂಜೂರಾಗಿದ್ದು 3 ತಿಂಗಳ ಹಿಂದೆಯೇ ₹65 ಲಕ್ಷ ಪಟ್ಟಣ ಪಂಚಾಯಿತಿಗೆ ಬಂದಿದೆ. 8 ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲು₹11.40ಲಕ್ಷ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಇದೆ. ಪಟ್ಟಣ ಪಂಚಾಯಿತಿಯಲ್ಲಿ ನೌಕರರ ಕೊರತೆ, ರಸ್ತೆ ಅಗಲೀಕರಣ ಒತ್ತಡ, ಎಸ್.ಐ.ಆರ್, ಜಾತಿ ಗಣತಿಯಲ್ಲಿ ನೌಕರರು ತೊಡಗಿಸಿಕೊಂಡಿದ್ದರಿಂದ ವೈಯಕ್ತಿ ಕ ಅನುದಾನ ನೀಡಲು ವಿಳಂಬವಾಗುತ್ತಿದೆ.465 ಫಲಾನುಭವಿಗಳಲ್ಲಿ ಎಸ್.ಸಿ ಫಲಾನುಭವಿಗಳಿಗೆ ಮನೆ ರಿಪೇರಿ, ಶೌಚಾಲಯ ರಿಪೇರಿ,ವೈದ್ಯಕೀಯ ಚಿಕಿತ್ಸೆ, ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಎಸ್.ಟಿ.ಫಲಾನುಭವಿಗಳಿಗೆ ಮನೆ ರಿಪೇರಿ, ವಿದ್ಯಾರ್ಥಿ ವೇತನ,ಶೌಚಾಲಯ ನಿರ್ಮಾಣ ಹಾಗೂ ಇತರ ಬಡವರಿಗೆ ಮನೆ ದುರಸ್ತಿ, ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಅಲ್ಲದೆ 8 ಜನ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡಲಾಗುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ದಾಖಲೆ ಸರಿಪಡಿಸಿಕೊಂಡು ಫಲಾನುಭವಿಗಳ ಸಮಾವೇಶ ನಡೆಸಿ ಅನುದಾನ ವಿತರಿಸಲಾಗುತ್ತದೆ ಎಂದರು.
2023 ರ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನಗರೋತ್ತಾನ ವೈಯಕ್ತಿಕ ಅನುದಾನ ನಿರೀಕ್ಷೆ ಇಟ್ಟುಕೊಂಡು ಪಟ್ಟಣದ ಮತದಾರರಿಗೆ ಮಂಜೂರಾತಿ ಪತ್ರ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆ ಉಂಟಾಗಿತ್ತು. ಈ ಸಂದರ್ಭದಲ್ಲಿ ನಮ್ಮದೇ ಸರ್ಕಾರ ಇದ್ದರೂ ಸರ್ಕಾರ ವಿರುದ್ದವೇ ಪತ್ರಿಕಾ ಹೇಳಿಕೆ ನೀಡಿ ಮಂತ್ರಿಗಳ ಮೇಲೆ ತೀವ್ರ ಒತ್ತಡ ಹಾಕಿ ಹಣ ಮಂಜೂರು ಮಾಡಿಸಿಕೊಂಡು ಬಂದಿದ್ದೇವೆ.
ಜೊತೆಗೆ ಶಾಸಕ ಟಿ.ಡಿ.ರಾಜೇಗೌಡ ಹಾಗೂ ರಾಜ್ಯ ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ಸಹ ಮಂತ್ರಿಗಳ ಮೇಲೆ ಒತ್ತಡ ತಂದಿದ್ದರು. ರಾಜ್ಯದಲ್ಲೇ ಪ್ರಥಮ ಬಾರಿಗೆ ನಗರೋತ್ತಾನ ವೈಯಕ್ತಿಕ ಅನುದಾನ ಎನ್.ಆರ್.ಪುರ ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾಗಿದೆ ಎಂದು ಸಂಬಂಧಪಟ್ಟ ದಾಖಲೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಮುನಾವರ್ ಪಾಷಾ, ಮಹಮ್ಮದ್ ವಸೀಂ ಇದ್ದರು.- ಬಾಕ್ಸ್-
ಪಟ್ಟಣ ಪಂಚಾಯಿತಿ ನಗರೋತ್ತಾನ ವೈಯ್ಯಕ್ತಿಕ ಅನುದಾನ ಕಳೆದ 3 ವರ್ಷದಿಂದ ವಿಳಂಬವಾಗುತ್ತಿದ್ದು ನಮ್ಮ ಸರ್ಕಾರದ ವಿರುದ್ಧ ನಾವೇ ಹೋರಾಟ ಮಾಡುತ್ತಿದ್ದರೂ ವಿರೋಧ ಪಕ್ಷವಾದ ಬಿಜೆಪಿ ಧ್ವನಿ ಎತ್ತಿರಲಿಲ್ಲ. ಈಗ ಹಣ ಬಿಡುಗಡೆಯಾದ ಮಾಹಿತಿ ಸಿಕ್ಕಿದ ಮೇಲೆ ಬಿಜೆಪಿ ನಗರ ಅಧ್ಯಕ್ಷರು ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇದು ಚುನಾವಣೆ ಲಾಭಕ್ಕಾಗಿ ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತಶೆಟ್ಟಿ ಹಾಗೂ ಮಾಜಿ ಅಧ್ಯಕ್ಷೆ ಜುಬೇದ ಆರೋಪಿಸಿದರು.