ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಹಲವು ಜಾತಿ ಜನಾಂಗಗಳಿರುವ ಸಮಾಜದಲ್ಲಿ ಜನ್ಮ ತಾಳಿರುವ ನಾವು ಒಂದು ಸಮುದಾಯದ ಮೂಲಕ ಗುರುತಿಸಿಕೊಳ್ಳುತ್ತೇವೆ ಅಷ್ಟೇ. ಹೀಗಾಗಿ ಸಮುದಾಯ ಭವನಗಳು ಎಲ್ಲಾ ಸಮುದಾಯದ ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗುವಂತಿರಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಚಂದಗಾಲು ಗ್ರಾಮದ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾವುದೋ ಒಂದು ಸಮುದಾಯದಲ್ಲಿ ಜನಿಸಿ, ಗುರುತಿಸಿಕೊಳ್ಳುತ್ತೇವೆ ಅಷ್ಟೇ. ಸಮಾಜದ ಸೂಕ್ಷ್ಮಾತಿ ಸೂಕ್ಷ್ಮ ಸಮುದಾಯದ ಜನರು ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಒಕ್ಕಲುತನ ಎಂದರೆ ಬಿತ್ತನೆ ಮಾಡಿದ ಫಸಲು ಕೈಗೆ ಬಂದಾಗ ಅದರ ರಾಶಿ ಪೂಜೆ ಮಾಡಿ ಎಲ್ಲಾ ಸಮುದಾಯದವರಿಗೆ ನೀಡಿದ ಬಳಿಕ ಉಳಿದದ್ದನ್ನು ಮನೆಗೆ ತೆಗೆದುಕೊಂಡು ಹೋಗುವುದು ಅಂದರೆ ಹಂಚಿ, ಬದುಕುವುದೇ ಒಕ್ಕಲುತನ ಎಂದ ಅವರು ನಾನು 40 ವರ್ಷದ ಹಿಂದೆ ಓದುತ್ತಿದ್ದ ಸಂದರ್ಭದಲ್ಲಿ ಚಂದಗಾಲಿಗೆ ಬಂದಿದೆ ಎಂದು ಅವರು ಹೇಳಿದರು.

ಈ ವೇಳೆ ಕೆ.ಆರ್. ನಗರದ ದೇವೇಗೌಡ ಸಮುದಾಯ ಭಾವನೆಗೆ ಹೆಸರಿಡುವ ಸಂದರ್ಭದಲ್ಲಿನ ಗೊಂದಲಗಳನ್ನು ನೆನಪಿಸಿಕೊಂಡ ಅವರು ಮೈಸೂರಿನ ಸರ್ಕಾರಿ ಜಾಗದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟಿದ್ದಾರೆ. ಆದರೆ ಸಮುದಾಯದ ಆಸ್ತಿಯಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ದೇವೇಗೌಡರ ಹೆಸರನ್ನು ಇಡುವ ಸಂದರ್ಭದಲ್ಲಿ ಕೆಲವೊಂದು ಬೇಸರಗಳು ಬಂದ ಸಂದರ್ಭದಲ್ಲಿ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು ಎಂದರು.


ಚಂದಗಾಲು ಗ್ರಾಮದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ನಾನು ವೈಯಕ್ತಿಕವಾಗಿ ಹಾಗೂ ಕುಮಾರಣ್ಣ ಮತ್ತು ಇತರರಿಂದ ಅನುದಾನ ಕೊಡಿಸುತ್ತೇನೆ. ನಿಮ್ಮ ಕೈಲಾದಷ್ಟು ಮಾಡಿ ಕಟ್ಟಡವನ್ನು ಪೂರ್ಣ ಮಾಡುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು.

ನವ ನಗರ ಕೋ ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ಕೆ.ಎನ್. ಬಸಂತ್ ಮಾತನಾಡಿದರು. ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಜಿಲ್ಲಾ ಕೌಶಲ್ಯ ಅಭಿವೃದ್ಧಿಯ ನಿವೃತ್ತ ಸಹಾಯಕ ನಿರ್ದೇಶಕ ಸಿ.ಎಸ್. ಸುದರ್ಶನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್, ನಿವೃತ್ತ ಉಪ ನಿರ್ದೇಶಕ ಸಿ.ಎಸ್. ರಾಮಲಿಂಗ, ನವನಗರ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ಸಿ. ಸುರೇಶ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷ್ಮಿ, ಪುರಸಭೆ ಮಾಜಿ ಸದಸ್ಯ ಕೆ.ಎಲ್. ಜಗದೀಶ್, ಗ್ರಾಮ ಅಭಿವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್, ಮಂಜು, ಸಿ.ಟಿ. ರಾಮಚಂದ್ರಪ್ಪ, ಸಿ.ಜೆ. ಗೌಡಪ್ಪ ಮೊದಲಾದವರು ಇದ್ದರು.