ಸಾರಾಂಶ
ಶಿರಸಿ: ವಿದ್ಯಾರ್ಥಿಗಳಲ್ಲಿನ ಆಸಕ್ತಿ ಗುರುತಿಸಿ,ಅವರಿಗೆ ಯಾವ ಕೋರ್ಸ್ ತೆಗೆದುಕೊಂಡರೆ ಇಂತಹ ಅವಕಾಶ ಇದೆಯೆಂಬ ಮಾರ್ಗದರ್ಶನ ನೀಡಬೇಕು.ಮಕ್ಕಳಿಗೆ ಅನಗತ್ಯ ಒತ್ತಡ ಹಾಕದೇ ಪ್ರೋತ್ಸಾಹಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಲೆಕ್ಕ ಪರಿಶೋಧಕ ಮಂಜುನಾಥ ಶೆಟ್ಟಿ ಹೇಳಿದರು.
ಅವರು ಭಾನುವಾರ ಗಾಣಿಗ ಸಭಾಭವನದಲ್ಲಿ ಗಾಣಿಗ ಸಮಾಜ ಯುವಕ ಮಂಡಳದ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಭವಿಷ್ಯದ ಅವಕಾಶಗಳು, ಆರೋಗ್ಯ ವಿಮೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಬಾಲ್ಯದಲ್ಲೆ ಗುರಿ ಇರಬೇಕು. ಗುರು-ಹಿರಿಯರ ಗೌರವಿಸಬೇಕು. ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣದಿಂದ ಉತ್ತಮ ಪ್ರಜೆಯಾಗಲು ಸಾಧ್ಯ.ಮೊಬೈಲನ್ನು ಶೈಕ್ಷಣಿಕ ಉದ್ದೇಶಕ್ಕೆ ಮಕ್ಕಳು ಬಳಸಬೇಕು.ಅನಗತ್ಯ ಬಳಕೆಗೆ ಪಾಲಕರು ಅವಕಾಶ ನೀಡಬಾರದು ಎಂದರು.ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಬಳಿಕ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಪರೀಕ್ಷೆ ಎದುರಿಸಬೇಕು. ಸಿಎ, ಸಿಎಸ್ ಪರೀಕ್ಷೆಗೂ ಭಾಗವಹಿಸಬೇಕು. ಭವಿಷ್ಯ ರೂಪಿಸುವ ಅವಕಾಶ,ತರಬೇತಿ ಯುವಕ ಸಂಘ ಮಾಡಬೇಕು. ಉಕ ಮತ್ತು ದಕ ಜಿಲ್ಲೆಯಲ್ಲಿ ಇಂತಹ ಸಾಧಕರು ಹೆಚ್ಚಬೇಕು ಎಂದರು.
ಹಿರಿಯ ಆಯುರ್ವೇದ ವೈದ್ಯ ಡಾ. ರವಿಕಿರಣ ಪಟವರ್ಧನ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅವಘಡಗಳು ಯಾವಾಗಲೂ ಸಂಭವಿಸುವುದರಿಂದ ನಾವು ತುರ್ತು ಸಂದರ್ಭ ಎದುರಿಸಲು ಆರೋಗ್ಯ ವಿಮೆ,ಅಪಘಾತ ವಿಮೆ ಮಾಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದೇ ಹಲವು ಯೋಜನೆ ಇದೆ. ನಿವೃತ್ತ ವೇತನವೂ ಇದೆ ಎಂದು ಮಾಹಿತಿ ನೀಡಿದರು.ಶಿರಸಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘದ ಕಾರ್ಯಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ಗಜಾನನ ಎಸ್.ಶೆಟ್ಟಿ, ಸಂಘದ ಕಾರ್ಯ ವಿವರಿಸಿ ೧೦ ವರ್ಷಗಳಿಂದ ನಡೆಸುತ್ತಿರುವ ಪ್ರತಿಭಾ ಪುರಸ್ಕಾರ ಮಾಹಿತಿ ನೀಡಿದರು.ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಸಾಧಕರಿಗೆ ಪ್ರೋತ್ಸಾಹಿಸಲಾಯಿತು. ಶಿಕ್ಷಕರಿಗೂ ಹೂ ನೀಡಿ ಗೌರವಿಸಲಾಯಿತು. ಗಾಣಿಗ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಸುನೀಲ ಶೆಟ್ಟಿ ವೇದಿಕೆಯಲ್ಲಿದ್ದರು. ನಿತೀನ ಶೆಟ್ಟಿ ನಿರ್ವಹಿಸಿದರು. ಅನಿಲ ಶೆಟ್ಟಿ ವಂದಿಸಿದರು.