ಗೌಡ ಮಹಿಳಾ ಒಕ್ಕೂಟ ಮೂರ್ನಾಡು ವತಿಯಿಂದ ಮೂರ್ನಾಡು ಗೌಡ ಸಮಾಜದಲ್ಲಿ ಆಟಿ ಹಬ್ಬ ಆಚರಣೆ ಮಾಡುವುದರ ಮೂಲಕ ವೈವಿಧ್ಯಮಯ ಕಾರ್ಯಕ್ರಮದ ಮಹತ್ವ ತಿಳಿಸಲಾಯಿತು.

ನಾಪೋಕ್ಲು: ಗೌಡ ಮಹಿಳಾ ಒಕ್ಕೂಟ ಮೂರ್ನಾಡು ವತಿಯಿಂದ ಮೂರ್ನಾಡು ಗೌಡ ಸಮಾಜದಲ್ಲಿ ಆಟಿ ಹಬ್ಬ ಆಚರಣೆ ಮಾಡುವುದರ ಮೂಲಕ ವೈವಿಧ್ಯಮಯ ಕಾರ್ಯಕ್ರಮದ ಮಹತ್ವ ತಿಳಿಸಲಾಯಿತು.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹರಪನಹಳ್ಳಿ ರವೀಂದ್ರ ಮಾತನಾಡಿ, ಮಹಿಳೆಯರ ಸಾಧನೆ ವಿಶ್ವಕ್ಕೆ ಪಸರಿಸಲಿ ಎಂದು ನುಡಿದರು. ಸಂಘಕ್ಕೆ 50 ಸಾವಿರ ರು. ದೇಣಿಗೆ ನೀಡಿದರು.

ನಿವೃತ್ತ ಡಿಸ್ಟಿಕ್ ನರ್ಸಿಂಗ್ ಆಫೀಸರ್ ಬೈಲೊಳಿ ಕುಸುಮ ಅವರು ಆಟಿ ಹಬ್ಬದ ವಿಶೇಷ ಅಡುಗೆಗಳ ಪ್ರದರ್ಶನ ಉದ್ಘಾಟಿಸಿ ವಿಶೇಷ ಆಟಿ ಅಡುಗೆ ತಿಂಡಿಗಳು ನಮ್ಮ ಅಡುಗೆ ಮನೆಯಲ್ಲಿ ತಯಾರಾಗುವುದರೊಂದಿಗೆ ನಮ್ಮ ಆರೋಗ್ಯವು ವೃದ್ಧಿಸುತ್ತದೆ. ಇದರ ಹಿಂದೆ ಮಹಿಳೆಯರ ಶ್ರಮ ಹಾಗೂ ಪುರುಷರ ಪ್ರೋತ್ಸಾಹ ಇದೆ ಎಂದು ಹೇಳಿದರು. ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತಲೆ ಹರೀಶ ಮಾತನಾಡಿ, ನಮ್ಮ ಮಕ್ಕಳಿಗೂ ಕೂಡ ಕೃಷಿಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು. ಇದರಿಂದ ನಮ್ಮ ಜನಾಂಗದ ಪರಂಪರೆ ಉಳಿಯುವುದು ಎಂದರು.

ಮೂರ್ನಾಡು ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷರಾದ ಕಲ್ಲು ಮುಟ್ಟಲು ಜಸ್ಮಿ ಅಧ್ಯಕ್ಷತೆ ವಹಿಸಿದರು.

ಆಟಿಹಬ್ಬದಲ್ಲಿ ಮಾಡುವ ತಿಂಡಿ ತಿನಿಸುಗಳ ಮಹತ್ವವನ್ನು ಹಾಗೂ ಅವುಗಳ ಉಪಯೋಗಗಳ ಕುರಿತು ಕಲ್ಲುಮುಟ್ಟಳು ಜಮುನಾ ಅವರು ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ತಿಂಡಿಗಳ ಭೋಜನ ನಡೆಯಿತು.

ಮೂರ್ನಾಡು ಸುತ್ತಮುತ್ತಲಿನ ಮಹಿಳಾ ಸದಸ್ಯರು ಆಟಿ ಸೊಪ್ಪು, ಮರ ಕೆಸ, ಕಣಿಲೆ, ಅಣಬೆ, ಏಡಿ, ಹಲಸಿನ ಹಣ್ಣು, ಹಲಸಿನ ಬೀಜ ಮುಂತಾದ ಬಗೆಬಗೆಯ ಆಟಿ ತಿಂಗಳ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿದರು.