ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಜಗದಗಲ ಖ್ಯಾತಿ ಗಳಿಸಿರುವ ರೋಟರಿ ಸಂಸ್ಥೆಯು ನಾಯಕತ್ವ ಗುಣ ಬೆಳೆಸಲು ನೆರವಾಗುವುದರೊಂದಿಗೆ ಸದಸ್ಯರಲ್ಲಿರುವ ಪ್ರತಿಭೆಯ ಅನಾವರಣಕ್ಕೂ ವೇದಿಕೆಯಾಗಿ ಸಮಾಜ ಸೇವೆಗೆ ಪ್ರೇರೇಪಣೆ ನೀಡುತ್ತದೆ ಎಂದು ಸುಳ್ಯ ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಡಾ. ಪಿ. ಕೆ. ಕೇಶವ್ ಹೇಳಿದ್ದಾರೆ.ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ ನ ನೂತನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಮತ್ತು ಕಾರ್ಯದರ್ಶಿಯಾಗಿ ಕಿರಣ್ ಕುಂದರ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಸರಿಯಾದ ವೇದಿಕೆಗಳು ದೊರಕದೇ ಇದ್ದಾಗ ಅಸಾಮಾನ್ಯ ವ್ಯಕ್ತಿ ಕೂಡ ಸಾಮಾನ್ಯನಾಗಿ ಬಿಡುತ್ತಾನೆ. ರೋಟರಿಯಂಥ ನಾಯಕತ್ವ ಬೆಳೆಸುವ ಸಂಸ್ಥೆಗಳು ಅಸಮಾನ್ಯ ವ್ಯಕ್ತಿತ್ವದವರೊಂದಿಗೆ ಸಾಮಾನ್ಯನನ್ನೂ ಅಸಮಾನ್ಯ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ರೋಟರಿಯಂಥ ಸೇವಾ ಸಂಸ್ಥೆಗಳಲ್ಲಿ ಸೇರ್ಪಡೆಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡ ಹೇಗೆ ಎಲ್ಲ ಆಟಗಾರರ ಸಾಮರ್ಥ್ಯ ಬಳಸಿಕೊಂಡು ಗೆಲುವಿನ ಜಯಭೇರಿ ಕಂಡಿದೆಯೋ ಅಂತೆಯೇ ರೋಟರಿ ಸಂಸ್ಥೆ ಕೂಡ ತನ್ನಲ್ಲಿನ ಎಲ್ಲ ಸದಸ್ಯರ ಪ್ರತಿಭೆಯನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಾಗಬೇಕು ಎಂದು ಕೇಶವ್ ಆಶಿಸಿದರು.
ಜೀವನದಲ್ಲಿ ಒಂದು ಹಂತದವರೆಗೆ ಸಂಪತ್ತು, ಕೀರ್ತಿ ಸಂಪಾದನೆ ಮಾಡಬೇಕು, ಆದರೆ ಇವೆಲ್ಲಾ ದೊರಕಿದ ಮೇಲೆಯೂ ಸಮಾಧಾನ ದೊರಕದೇ ಹೋದಾಗ ಸಾಮಾಜಿಕ ಸೇವೆಗೆ ಮುಂದಾದರೆ ಮಾತ್ರ ಮಾನಸಿಕ ನೆಮ್ಮದಿ ದೊರಕುತ್ತದೆ, ರೋಟರಿಯ ಸೇವಾ ಕಾರ್ಯಗಳು ಈ ಸಂಸ್ಥೆಯ ಸದಸ್ಯರಿಗೆ ಬೇರೆಲ್ಲೂ ದೊರಕದ ಮಾನಸಿಕ ಸಂತೋಷ ಮತ್ತು ನೆಮ್ಮದಿಯನ್ನು ದೊರಕಿಸಿಕೊಡುತ್ತದೆ ಎಂದು ಡಾ. ಕೇಶವ್ ಹೇಳಿದರು.ಈ ರೋಟರಿ ವರ್ಷದ ಸಂದೇಶವಾದ ಮ್ಯಾಜಿಕ್ ಆಫ್ ರೋಟರಿ ಮೂಲಕ ರೋಟರಿಯ ಸೇವಾ ಕಾರ್ಯಗಳು ಜನರ ಜೀವನದಲ್ಲಿ ಉಂಟು ಮಾಡುತ್ತಿರುವ ಮ್ಯಾಜಿಕ್ ನಂಥ ಅದ್ಭುತವನ್ನು ಜನರಿಗೆ ತಲುಪಿಸಬೇಕೆಂದೂ ಕೇಶವ್ ನುಡಿದರು. ಸಮಾಜದ ವಿವಿಧ ವರ್ಗಗಳ ಜನರಿಗೆ, ಅಗತ್ಯವುಳ್ಳವರಿಗೆ ರೋಟರಿಯು 119 ವರ್ಷಗಳಿಂದ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆ, ಕೊಡುಗೆಗಳನ್ನು ತಿಳಿಸುತ್ತಲೇ, ಹೊಸ ಸದಸ್ಯರನ್ನು ರೋಟರಿಗೆ ಸೇರ್ಪಡೆಗೊಳಿಸಲು ಸೂಕ್ತ ಸಮಯ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು,
ರೋಟರಿ ವಲಯ 6 ರ ಸಹಾಯಕ ಗವರ್ನರ್ ದೇವಣಿರ ಕಿರಣ್ ಮಾತನಾಡಿ, ಈ ರೋಟರಿ ವರ್ಷದಲ್ಲಿ ಅಂಗನವಾಡಿಗಳಿಗೆ ಕಾಯಕಲ್ಪ, ಸಂಚಾರ ಮತ್ತು ಮಾದಕ ವ್ಯಸನದ ಜಾಗೃತಿ ಬಗ್ಗೆ ಕಾರ್ಯಕ್ರಮ ಸೇರಿದಂತೆ 9 ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ರೋಟರಿ ಸಂಸ್ಥೆಗಳು ಮುಂದಾಗಿದೆ ಎಂದು ಹೇಳಿದರು.ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ 3 ವರ್ಷಗಳ ಹಿಂದೆ ಪ್ರಾರಂಭಿಸಿದ ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾದ ರೋಟರಿ ವುಡ್ಸ್ ಸಮಾಜ ಸೇವೆಯಲ್ಲಿ ಸಾರ್ಥಕತೆಯೊಂದಿಗೆ ಜನರ ಮನಗೆದ್ದಿದೆ ಎಂದು ಶ್ಲಾಘಿಸಿದರು.
ರೋಟರಿ ವುಡ್ಸ್ ನೂತನ ಅಧ್ಯಕ್ಷ ಹರೀಶ್ ಕಿಗ್ಗಾಲು, ಈ ವರ್ಷದಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿಸುವುದಾಗಿ ಭರವಸೆ ನೀಡಿದರು,ಇದೇ ಸಂದರ್ಭ ಜಾದೂಗಾರ ವಿಕ್ರಂಶೆಟ್ಟಿ ಮ್ಯಾಜಿಕ್ ಮೂಲಕ ಬುಟ್ಟಿಯೊಳಗಿನಂದ ರೋಟರಿ ವುಡ್ಸ್ ನ ವಾತಾ೯ ಸಂಚಿಕೆ ಅನಾವರಣಗೊಳಿಸಿ ಗಮನ ಸೆಳೆದರು,
ರೋಟರಿ ವುಡ್ಸ್ ವತಿಯಿಂದ ಮಡಿಕೇರಿಯ ಅಡುಗೆ ಅನಿಲ ಸಿಲಿಂಡರ್ ವಿತರಕರಾದ ಮಂಜುನಾಥ್, ಸುರೇಶ್, ಇಫಾ೯ನ್ ಎಂ, ಆರ್, ಉನೈಜ್, ವಜೀರ್, ಪೀಟರ್, ಇಮ್ರಾನ್ ಅವರನ್ನು ಸನ್ಮಾನಿಸಲಾಯಿತು, ರೋಟರಿ ವುಡ್ಸ್ ನ ಗೌರವ ಸದಸ್ಯರಾಗಿ ಅರಣ್ಯಾಧಿಕಾರಿ ಮಯೂರ್ , ಸದಸ್ಯರಾಗಿ ಕೆ, ರವಿ ಮತ್ತು ಪವನ್ ವಸಿಷ್ಟ ಸೇಪ೯ಡೆಯಾದರು,ರೋಟರಿ ವುಡ್ಸ್ ನಿರ್ಗಮಿತ ಅಧ್ಯಕ್ಷ ವಸಂತ್ ಕುಮಾರ್ ತನ್ನ ಅವಧಿಯ ಸೇವಾ ಕಾರ್ಯಗಳ ಮಾಹಿತಿ ನೀಡಿದರು. ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ವಂದಿಸಿದ ಕಾರ್ಯಕ್ರಮದಲ್ಲಿ ರೋಟರಿ ವಲಯ 6 ರ ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಪಾಲ್ಗೊಂಡಿದ್ದರು,