ಮಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಪರಿಸ್ಥಿತಿ ಹೊರತೂ ಭಾರತದಲ್ಲಿ ಇಂಧನ ಹಾಗೂ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯತೆ, ದುರ್ಬಲ ವಿದೇಶಾಂಗ ನೀತಿಯೇ ಕಾರಣ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಆರೋಪಿಸಿದ್ದಾರೆ.

ಮಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಪರಿಸ್ಥಿತಿ ಹೊರತೂ ಭಾರತದಲ್ಲಿ ಇಂಧನ ಹಾಗೂ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯತೆ, ದುರ್ಬಲ ವಿದೇಶಾಂಗ ನೀತಿಯೇ ಕಾರಣ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಮತ್ತು ಇಸ್ರೇಲ್‌ ಸೇರಿ ನಡೆಸುವ ಯುದ್ಧ ಇಡೀ ಪ್ರಪಂಚಕ್ಕೆ ಆಪತ್ತು ತಂದೊಡ್ಡಿದೆ. ಬಲವಾದ ಯಾವುದೇ ಕಾರಣ ಇಲ್ಲದೆಯೇ ಯುದ್ಧ ನಡೆಯುತ್ತಿದೆ. ಭಾರತ ಸರ್ಕಾರ ಕೂಡ ವಿದೇಶಿ ರಾಷ್ಟ್ರಗಳ ಜೊತೆ ನೇರ ಬೆಂಬಲ ಹೊಂದಿಲ್ಲ, ವಿದೇಶಿ ರಾಷ್ಟ್ರಗಳು ಕೂಡ ಭಾರತಕ್ಕೆ ಖಚಿತ ಬೆಂಬಲ ವ್ಯಕ್ತಪಡಿಸುತ್ತಿಲ್ಲ. ಹೀಗಿರುವಾಗ ಇಂಧನ ಕೊರತೆ ವಿಚಾರದಲ್ಲಿ ಎಸ್ಮಾ ಜಾರಿಗೊಳಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿದೆ. ಇನ್ನೊಂದೆಡೆ ತೈಲ ಬಿಕ್ಕಟ್ಟು ಇಲ್ಲ ಎನ್ನುತ್ತಿದೆ. ಹಾಗಾದರೆ ಎಸ್ಮಾ ಜಾರಿಗೊಳಿಸಿದ್ದು ಯಾಕೆ? ಎಲ್ಲದಕ್ಕೂ ಮೂಲ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಟ್ರಂಪ್‌ ಸೂಚನೆ ಮೇರೆಗೆ ಕೇಂದ್ರ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು. ಪ್ರಸ್ತುತ ಭಾರತದ ವಿದೇಶಾಂಗ ನೀತಿ ದುರ್ಬಲವಾಗಿರುವುದಕ್ಕೆ ಇಂಧನ ಕ್ಷೇತ್ರದಲ್ಲಿನ ವಿದ್ಯಮಾನಗಳೇ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಬಂದು ಹೋದಲ್ಲೆಲ್ಲ ಅದಾನಿ, ಅಂಬಾನಿಗಳಿಗೆ, ಬಿಜೆಪಿಗೆ ಲಾಭವಾಗಿದ್ದು ಬಿಟ್ಟರೆ ಜನಸಾಮಾನ್ಯರಿಗೆ ಏನೂ ಪ್ರಯೋಜನ ಆಗಿಲ್ಲ. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿರುವ ಜೆಪ್ರಿ ಎಪ್‌ಸ್ಟೀನ್‌ ಪ್ರಕರಣದ ಕಡತಗಳಿಗೂ ಪ್ರಧಾನಿ ಮೋದಿ ಮೌನಕ್ಕೂ ನಂಟು ಇದೆಯೇ ಎಂದು ಹರೀಶ್‌ ಕುಮಾರ್‌ ಅನುಮಾನ ವ್ಯಕ್ತಪಡಿಸಿದರು.

ಯುದ್ಧ ಆರಂಭಕ್ಕೂ ಮುನ್ನ ಗ್ಯಾಸ್‌ ಸಿಲಿಂಡರ್‌ ಬೆಲೆ 60 ರು. ಏರಿಕೆಯಾಗಿದೆ. ಯುಪಿಎ ಅವಧಿಯಲ್ಲಿ ಇಂಧನ ಬೆಲೆ 10 ರು. ಏರಿಕೆಯಾದಾಗ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸಂಸದರು, ಸಚಿವೆ ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ? ಜಿಎಸ್‌ಟಿ, ಬೆಲೆ ಏರಿಕೆ ಮುಂತಾದವುಗಳನ್ನು ಕೇಂದ್ರ ಸರ್ಕಾರ ಮಧ್ಯರಾತ್ರಿಯೇ ಜಾರಿಗೊಳಿಸುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಮುಖಂಡರಾದ ಶಶಿಧರ್‌ ಹೆಗ್ಡೆ, ಸದಾಶಿವ ಉಳ್ಳಾಲ್‌, ಅಪ್ಪಿಲತಾ, ಸುಬೋಧ್‌ ಆಳ್ವ, ಸಲೀಂ, ಯಶ್‌ಪಾಲ್‌, ಸುಧೀರ್‌ ಟಿ.ಕೆ, ಚಿತ್ತರಂಜನ್‌ ಶೆಟ್ಟಿ, ಸಹನ್‌ ಆಳ್ವ ಮತ್ತಿತರರಿದ್ದರು.