ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿದ್ದು ಆತನಿಂದ ₹೨೬,೮೨,೫೦೦ ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿಕೊಂಡಿದ್ದಾರೆ. ವಿಜಯಪುರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಅತ್ಯಂತ ಚಾಣಾಕ್ಷತನದಿಂದ ಈ ಪ್ರಕರಣಗಳನ್ನು ಬೇಧಿಸಿದೆ. ಈ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಅಶ್ಪಾಕ್ ಊರ್ಫ ಅಶೋಕ ಸೈಫನಸಾಬ ಶೇಖ ಜಾತಗಾರ(31 )ಎಂದು ಗುರುತಿಸಲಾಗಿದೆ. ಆರೋಪಿಯು ಜಲನಗರ, ಎಪಿಎಂಸಿ ಪೊಲೀಸ್ ಠಾಣೆ ಹಾಗೂ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬುದು ತನಿಖೆ ವೇಳೆ ತಿಳಿದು ಬಂದಿದ್ದು, ಪ್ರಕರಣದಲ್ಲಿ ಒಟ್ಟು ೩೬೨.೫ ಗ್ರಾ ಬಂಗಾರದ ಆಭರಣ, ೩೦೦ ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ₹೨೬,೮೨,೫೦೦ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.ಕಳ್ಳತನ ಪ್ರಕರಣಗಳ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು, ಈ ತಂಡ ಮಾಹಾರಾಷ್ಟ್ರದ ಸಾಂಗ್ಲಿ, ಪುಣೆ, ಹಾಗೂ ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿಯ ಆರೋಪಿತರ ತಪಾಸಣೆಯಲ್ಲಿ ಇದ್ದಾಗ ನಿನ್ನೆ ದಿನ ಬಂಧಿತನಾಗಿರುವ ಆರೋಪಿ ವಿಜಯಪುರ ಶಹರ ಆಶ್ರಮ ರಸ್ತೆಯ ತಿರುಗಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದರು.
ತನಿಖಾ ತಂಡದ ಕರ್ಯಕ್ಕೆ ಶ್ಲಾಘನೆ..!ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ. ಎಎಸ್ಪಿಗಳಾದ ರಾಮನಗೌಡ ಹಟ್ಟಿ, ಎಸ್.ಕೆ. ಮಾರಿಹಾಳ, ಡಿವೈಎಸ್ಪಿಗಳಾದ ಬಸವರಾಜ ಯಲಿಗಾರ, ಪೊಲೀಸ್ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಸಿತಾರಾಮ ಲಮಾಣಿ, ಪ್ರೇಮಾ ಕೂಚಬಾಳ, ಸಿಬ್ಬಂದಿಗಳಾದ ವೈ.ಪಿ. ಕಬಾಡೆ, ಎಸ್.ಎ. ಬನಪಟ್ಟಿ, ಮಹೇಶ ಸಾಲಕೇರಿ, ಜೆ ಎಸ್. ವನಂಜಕರ, ಆಸೀಪ ಲಷ್ಕರಿ, ಆನಂದಯ್ಯ ಪೂಜಾರಿ, ನಿಂಗಪ್ಪ ವಟಾರ, ಶಶಿಕಾಂತ ತೋರವಿ, ಕೆ.ಡಿ. ಕುಲರ್ಣಿ, ಗುರುಪಾದ ಕನ್ನೊಳ್ಳಿ, ಸಚೀನ ಜಾಧವ, ಆರ್.ಡಿ ಮುಲ್ಲಾ, ತಾಂತ್ರಿಕ ಸಿಬ್ಬಂದಿ ಗುಂಡು ಗಿರಣಿವಡ್ಡರ, ಮಹ್ಮದ ಭಾಗವಾನ, ಜಬ್ಬಾರ ಇಲಕಲ ಅವರ ತಂಡ ಈ ಪ್ರಕರಣವನ್ನು ಬೇಧಿಸಿದೆ ಎಂದು ಜಿಲ್ಲಾ ಪೊಲೀಸ ಅಧೀಕ್ಷಕ ಸೋನಾವಣೆ ವಿವರಿಸಿದರು.