ಹೊಸಕೋಟೆ: ನಿವೃತ್ತ ನ್ಯಾ. ನಾಗಮೋಹನ್‌ದಾಸ್ ವರದಿ ಪರಿಶಿಷ್ಟ ಜಾತಿಯ ಒಂದು ವರ್ಗದ ರಾಜಕೀಯ ತುಷ್ಟೀಕರಣಕ್ಕೆ ಸೀಮಿತವಾಗಿದ್ದು, ಉಪಜಾತಿಗಳಿಗೆ ಅನ್ಮಾಯವಾಗುವ ಕಾರಣ ಸರ್ಕಾರ ಅವರ ವರದಿಯನ್ನು ರದ್ದುಗೊಳಿಸಿ ಹಳೆ ಮೀಸಲಾತಿ ಪದ್ಧತಿಯನ್ನೇ ಜಾರಿಗೊಳಿಸಬೇಕು ಎಂದು ಅಣ್ಣಯ್ಯ ನೇತೃತ್ವದ ದಸಂಸ ಕರ್ನಾಟಕ ಜಿಲ್ಲಾ ಸಂಚಾಲಕ ಲೋಕೇಶ್ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿ ಅವೈಜ್ಞಾನಿಕ, ಪಕ್ಷಪಾತದಿಂದ ಕೂಡಿದೆ. ಕರ್ನಾಟಕ ಅನುಸೂಚಿತ ಜಾತಿಗಳ ಮಸೂದೆ ೨೦೧೫ರ ಸುತ್ತೋಲೆ ರದ್ದುಗೊಳಿಸಬೇಕು. ಹಾಗೂ ಈ ಹಿಂದೆ ಇದ್ದಂತಹ ಹಳೆ ಮೀಸಲಾತಿ ನಿಯಮಗಳನ್ನೇ ಮರು ಜಾರಿಗೊಳಿಸಬೇಕು.

ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪ್ರವರ್ಗ ಎ, ಬಿ, ಸಿ, ಎಂದು ವರ್ಗೀಕರಿಸುವುದರ ಮೂಲಕ ಜಾತಿ- ಜಾತಿಗಳ ಮಧ್ಯೆ ಒಡಕುಂಟು ಮಾಡುತ್ತಿದೆ. ಸರ್ಕಾರ ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು, ಹಾಗೂ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಬಳಗೈ ಗುಂಪಿನಲ್ಲಿ ಉದ್ಯೋಗ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಪಡೆಯುವಂತೆ ಅದಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ವರದಿ ಪರಿಶೀಲನೆಗೆ ವಿಶೇಷ ತನಿಖಾ ತಂಡ ರಚಿಸಿ:

ಚಿತ್ರದುರ್ಗ ಜಿಲ್ಲೆಯಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಕಡಿಮೆ ಮಾಡುವ ದುರುದ್ದೇಶದಿಂದ ಅಧಿಕಾರಿಗಳು ಮತ್ತು ಆಯೋಗದ ಅಧ್ಯಕ್ಷರು ಪ್ರಯತ್ನಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಇವರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ಮೊಕದ್ದಮೆ ದಾಖಲಿಸಬೇಕು ಹಾಗೂ ವಿಶೇಷ ತನಿಖಾ ತಂಡವನ್ನು ನೇಮಿಸಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.


10 ವರ್ಷಗಳಿಗೊಮ್ಮೆ ಸಮೀಕ್ಷೆ ಕಡ್ಡಾಯ:

ನ್ಯಾ.ನಾಗಮೋಹನ್ ದಾಸ್ ವರದಿಗೆ ಅನುಗುಣವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಪರಿಶಿಷ್ಟ ಆಯೋಗ ಉಪಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಹಾಗೂ ಉದ್ಯೋಗದ ದತ್ತಾಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಆಗಿಂದಾಗ್ಗೆ ವರದಿ ಸಲ್ಲಿಸಬೇಕು. ಇದರ ಆಧಾರದ ಮೇಲೆ ಸರ್ಕಾರ ದತ್ತಾಂಶಗಳನ್ನು ಕ್ರೂಢೀಕರಿಸಿ ಒಳಮಿಸಲಾತಿಯನ್ನು ಪುರಸ್ಕರಿಸಬೇಕು ಹಾಗೂ ತಮಿಳುನಾಡು ಜಾರ್ಖಂಡ್ ಸರ್ಕಾರಗಳ ಮಾದರಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದರು.

ಫೋಟೋ: 24 ಹೆಚ್‌ಎಸ್‌ಕೆ 1

ದಸಸಂಕ ಜಿಲ್ಲಾ ಸಂಚಾಲಕ ಲೋಕೇಶ್.