ಕನ್ನಡಪ್ರಭ ವಾರ್ತೆ ಕೋಲಾರಬಸವ ಜಯಂತಿ ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನವು ಆಚರಿಸಬೇಕು. ಬಸವ ತತ್ವ ಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ಬಸವ ಜಯಂತಿ ಸಾರ್ಥಕವಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಕರೆ ನೀಡಿದರು. ನಗರದ ಶ್ರೀ ಬಸವೇಶ್ವರ ಭಕ್ತಮಂಡಳಿ ಹಾಗೂ ಶರಣೆಯರ ಬಳಗದಿಂದ ಬಸವ ಜಯಂತಿ ಹಾಗೂ ಬಸವೇಶ್ವರ ದೇವಾಲಯ ೧೨ನೇ ವರ್ಷದ ಅಷ್ಟಬಂಧನ ಹಾಗೂ ಮಹಾಕುಂಭಾಷೇಕದ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.ಬಸವ ಜಯಂತಿ ವಿಶ್ವದ ಹಬ್ಬವಾಗಿದೆ. ಬಸವೇಶ್ವರ ಜೀವನವೇ ಶ್ರೇಷ್ಟವಾದ ಗ್ರಂಥವಾಗಿದೆ. ಜಾತಿಬೇಧ, ಅಸ್ಪಶ್ಯತೆ ಮೇಲು ಕೀಳು ಎಂಬ ಮೌಢ್ಯತೆಯ ಭಾವನೆಗಳನ್ನು ತೊರೆದು ಮಹಿಳೆಯರು ಸಹ ಪುರುಷರಷ್ಟೆ ಸಮಾನರು ಎಂಬ ಅರಿವು ಮೂಡಿಸಿದರು. ಸಾನಿಧ್ಯ ವಹಿಸಿದ್ದ ಶ್ರೀಮದ್ ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ಅನೇಕ ಸಂತರು ಸಮಾಜಕ್ಕೆ ಜ್ಞಾನದ ದಾಸೋಹ ನೀಡಿದ್ದಾರೆ. ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ಶರಣ ಸಂತರ ವಚನಗಳ ವಿಚಾರಧಾರೆಗಳು ಎಲ್ಲರಿಗೂ ಮನದಟ್ಟು ಮಾಡಿದ್ದಾರೆ ಎಂದರು.

ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್, ಶರಣೆಯರ ಬಳಗದ ಕಾರ್ಯದರ್ಶಿ ವಿಮಲ ಬೈಲಪ್ಪ, ಅಖಿಲಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಂಗಾರಪೇಟೆ ಸದಾಶಿವಯ್ಯ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಚೆನ್ನಪ್ಪ, ಶ್ರೀ ಬಸವೇಶ್ವರ ಭಕ್ತ ಮಂಡಳಿ ಅಧ್ಯಕ್ಷ ಗಂಗಾಧರ್, ಕೆ.ಬಿ.ಬೈಲಪ್ಪ ಇದ್ದರು.