ಇಂದಿರಾ ಕ್ಯಾಂಟಿನ್ ಬಡವರಿಗೆ ಉಪಯುಕ್ತವಾಗಿದೆ

| Published : Jun 27 2025, 12:48 AM IST

ಸಾರಾಂಶ

ಮೊಳಕಾಲ್ಮುರಲ್ಲಿ ಇಂದಿರಾ ಕ್ಯಾಂಟಿನ್‌ ಉದ್ಘಾಟಿಸಿ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಹಸುವು ಮುಕ್ತರಾಜ್ಯವನ್ನಾಗಿಸಲು ಸಿಎಂ ಸಿದ್ದರಾಮಯ್ಯ ಜಾರಿ ಮಾಡಿದ್ದ ಇಂದಿರಾಕ್ಯಾಂಟಿನ್ ಬಡವರಿಗೆ ಉಪಯುಕ್ತವಾಗಿದೆ. ಪ್ರತಿಯೊಬ್ಬರು ಇದರ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಗುರುವಾರ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿದೆ. ಬಿಜೆಪಿಯವರು ಈಗಿನ ಶಾಸಕರ ಏನೂ ಕೊಡುಗೆ ಇಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗ ಅವರಿನ್ನೂ ಹುಟ್ಟಿರಲಿಲ್ಲ. ಅಂತವರು ನನ್ನ ಕೆಲಸದ ಬಗ್ಗೆ ಮಾತನಾಡುತ್ತಾರೆ. ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ಎಲ್ಲರಿಗೂ ತಿಳಿದಿದೆ. ಹತ್ತಾರು ಪಿ ಎ ಗಳ ಮೂಲಕ ಹಾಳು ಮಾಡಿದ್ದ ಕ್ಷೇತ್ರವನ್ನು ಸರಿ ಮಾಡುತ್ತಿದ್ದೇನೆ.ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ತೊಂದರೆ ನೀಡಿದವನಲ್ಲ.ಅನಿರೀಕ್ಷಿತವಾಗಿ ಗೆದ್ದು ಬಂದಿದ್ದ ಆಗಿನ ಶಾಸಕ ನನ್ನ ಅಭಿವೃದ್ಧಿ ಕೆಲಸಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.ಅನಿರೀಕ್ಷಿತವಾಗಿ ಬಂದ ಅವರನ್ನು ಜನತೆ ಮತ್ತೆ ರಾಜಕೀಯವಾಗಿ ಮೂಲೆ ಸೇರಿಸಿದ್ದಾರೆ.ನನ್ನ ಒಳ್ಳೆತನ ಎಲ್ಲಿ ಹೋದರೂ ಜನ ಆಶೀರ್ವದಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಯವರ ಮೇಲೆ ವಾಗ್ದಾಳಿ ನಡೆಸಿದ ಅವರು ಬರುವ ದಿನಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶೀಘ್ರವಾಗಿ ಮಾದ್ಯಮದ ಮುಂದೆ ಕಡತ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಪ್ರಕಾಶ ಮಾತನಾಡಿ ಕಳೆದ ಬಾರಿ ಸಿದ್ದರಾಮಯ್ಯನ ಸರ್ಕಾರದಲ್ಲಿ ಮುಜೂರಾಗಿದ್ದ ಇಂದಿರಾ ಕ್ಯಾಂಟಿನ್ ಆಗಿನ ಶಾಸಕರ ನಿರ್ಲಕ್ಷ್ಯದಿಂದಾಗಿ ನೆನೆಗುದಿಗೆ ಬಿದ್ದಿತ್ತು.ಎನ್.ವೈ.ಗೋಪಾಲಕೃಷ್ಣ ಆಯ್ಕೆಯಾದ ನಂತರ ಕ್ಯಾಂಟಿನ್ ಆರಂಬಿಸಿ ಬಡವರಿಗೆ ನೆರವಾಗಿದ್ದಾರೆ ಆದರೆ ಬಿಜೆಪಿಯವರು ಶಾಸಕರ ಮೇಲೆ ಆದಾರ ರಹಿತ ಆರೋಪ ಮಾಡುತ್ತಿದ್ದಾರೆ.ನೂರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿಯವರು ಅಂದು ನಡೆಯುತ್ತಿದ್ದ ಬೃಷ್ಟಚಾರದ ಬಗ್ಗೆಯೂ ಮಾತನಾಡಬೇಕು.ಕಾಂಗ್ರೆಸ್ ಆಡಳಿತ ಅಭಿವೃದ್ಧಿ ಸಹಿಸದ ಇವರು ವಿನಾ ಕಾರಣ ಆರೋಪಿಸುತ್ತಿರುವುದು ಸಲ್ಲದು ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ, ಸದಸ್ಯರಾದ ಭಾಗ್ಯಮ್ಮ, ಖಾದರ್, ಅಬ್ದುಲ್ಲಾ, ಮಂಜಣ್ಣ, ನಾಮ ನಿರ್ದೇಶಿತ ಸದಸ್ಯ ದೇವದಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಿಂಗರಾಜ್, ಹಿರಿಯ ಮುಖಂಡ ಮರನಾಯಕ, ಅಬ್ದುಲ್ ಸುಬಾನ್ ಸಾಬ್, ನಜೀರ್, ಗೋವಿಂದಪ್ಪ, ಇಕ್ಬಾಲ್, ದೇವಯ್ಯ ಇದ್ದರು.

ತಿಪ್ಪೇಸ್ವಾಮಿ ಗೆಲವು ಅನಿರೀಕ್ಷತವಷ್ಟೇ: ಶಾಸಕ ಗೋಪಾಲಕೃಷ್ಣ

ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೋತಿದ್ದ ಎಸ್.ತಿಪ್ಪೇಸ್ವಾಮಿ ಅವರಿಗೆ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿ ಅಧ್ಯಕ್ಷನನ್ನಾಗಿಸಿದ್ದೆ. ವಿಧಾನ ಸಭಾ ಚುನಾವಣೆಯಲ್ಲಿ ಜನರು ನನ್ನ ಸೋಲಿಸಲೇಬೇಕೆಂದು ಅಂದು ಅವರನ್ನು ಗೆಲ್ಲಿಸಿದರು. ಅವರ ಗೆಲುವು ಅನಿರೀಕ್ಷಿತವಷ್ಟೇ. ಇವರು ನನ್ನ ಆಡಳಿತವನ್ನು ಪ್ರಶ್ನಿಸುತ್ತಿದ್ದಾರೆ. ಉಪ ಸಭಾಪತಿಯಾಗಿ ಕೆಲಸ ನಿರ್ವಹಿಸಿರುವ ನಾನು ಇಂಥವರಿಗೆ ಉತ್ತರ ಕೊಡುವ ವ್ಯಕ್ತಿ ನಾನಲ್ಲ. ಜನರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದೆ ಅಭಿವೃದ್ಧಿಯ ಕಡೆ ಗಮನ ಹರಿಸುತ್ತೇನೆ ಎಂದು ಶಾಸಕ ಎನ್‌.ವೈ. ಗೋಪಾಲಕೃಷ್ಣ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರ ಮೇಲೆ ವಾಗ್ದಾಳಿ ನಡೆಸಿದರು.