ಸಾಹಿತ್ಯ, ಶಿಕ್ಷಣಕ್ಕೆ ಜಮಾದಾರ ಕೊಡುಗೆ ಅಪಾರ: ಎಚ್.ಕೆ. ಪಾಟೀಲ

| Published : Mar 28 2025, 12:30 AM IST

ಸಾರಾಂಶ

ಗದಗ ಜಿಲ್ಲೆಯ ಕುರ್ತಕೋಟಿಯಲ್ಲಿ ಏ. 5ರಂದು ಜರುಗಲಿರುವ ಗದಗ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತಗೊಂಡಿರುವ ಸಾಹಿತಿ ಜೆ.ಕೆ. ಜಮಾದಾರ ಅವರ ಬೆಟಗೇರಿ ನಿವಾಸದಲ್ಲಿ ಸಚಿವ ಎಚ್‌.ಕೆ.ಪಾಟೀಲ್ ಅವರು ಅಧಿಕೃತ ಆಹ್ವಾನ ನೀಡಿದರು.

ಗದಗ: ಶಿಕ್ಷಕರಾಗಿ ಶೈಕ್ಷಣಿಕ ಕ್ಷೇತ್ರವನ್ನು ಉನ್ನತಗೊಳಿಸುವದರ ಜತೆಗೆ ಸೃಜನಶೀಲ ಬರಹದ ಮೂಲಕ ಸಾಹಿತ್ಯಿಕ ಪರಿಸರ ಶ್ರೀಮಂತಗೊಳಿಸಿದ ಕೀರ್ತಿ ಜೆ.ಕೆ. ಜಮಾದಾರ ಅವರದಾಗಿದೆ. ಅವರ ಸೇವೆಯನ್ನು ಮನಗಂಡು ಸಾಹಿತ್ಯ ಪರಿಷತ್ತು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.

ಅವರು ಕುರ್ತಕೋಟಿಯಲ್ಲಿ ಏ. 5ರಂದು ಜರುಗಲಿರುವ ಗದಗ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತಗೊಂಡಿರುವ ಸಾಹಿತಿ ಜೆ.ಕೆ. ಜಮಾದಾರ ಅವರ ಬೆಟಗೇರಿ ನಿವಾಸದಲ್ಲಿ ಅಧಿಕೃತ ಆಹ್ವಾನ ನೀಡಿ ಮಾತನಾಡಿದರು.

ಕುರ್ತಕೋಟಿ ಗ್ರಾಮ ಸಾಹಿತ್ಯ,ಧರ್ಮ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಮೋಘ ಕೊಡುಗೆ ನೀಡಿದ ಪ್ರದೇಶವಾಗಿದೆ. ಅಲ್ಲಿಯ ಇತಿಹಾಸ ಜನಮಾನಸಕ್ಕೆ ತಲುಪಿಸುವ ಕಾರ್ಯ ನಡೆಯಲಿ ಎಂದು ಆಶಿಸಿದರು.

ನಿಯೋಜಿತ ಸಮ್ಮೇಳನಾಧ್ಯಕ್ಷ ಜೆ.ಕೆ. ಜಮಾದಾರ ಮಾತನಾಡಿ, ಸಾಹಿತ್ಯದ ಅಲ್ಪ ಸೇವೆ ಮನಗಂಡು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದರು. ಗದುಗಿನ ಪರಿಸರ ಸಾಹಿತ್ಯ, ಕಲೆ, ರಂಗಭೂಮಿ, ಸಂಗೀತದ ಹಿನ್ನೆಲೆ ಹೊಂದಿದ್ದು, ಅದರ ಪೋಷಣೆ ನಮ್ಮ ಹೊಣೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಮ್ಮೇಳನಗಳು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜಾಗೃತವಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕನ್ನಡ ಅಸ್ಮಿತೆ ಕಾಪಾಡುವ ನಿಟ್ಟಿನಲ್ಲಿ ಪರಿಷತ್ತು ನಿರಂತರಾಗಿ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಡಾ.ರಶ್ಮಿ ಅಂಗಡಿ ಅಧಿಕೃತ ಆಹ್ವಾನ ಪತ್ರ ನೀಡಿದರು. ಸಭೆಯಲ್ಲಿ ಅಪ್ಪಣ್ಣ ಇನಾಮತಿ, ಶೇಖರಯ್ಯ ಹೊಸಮಠ, ಸಿದ್ದಯ್ಯ ವಿಭೂತಿ, ಜಿ.ಎನ್.ಪಾಟೀಲ, ಅಶೋಕ ಶಿರಹಟ್ಟಿ, ಪ್ರಕಾಶ ನಾಯ್ಕರ, ಕರಿಯಪ್ಪ ಕೊಡವಳ್ಳಿ, ರಾಘವೇಂದ್ರ ಹೊಸಮನಿ, ಬಾಬು ಗಾಣಿಗೇರ, ಡಾ.ಎಸ್.ಆರ್. ನಾಗನೂರ, ರಂಗನಗೌಡ ಓದುಗೌಡರ, ರತ್ನಕ್ಕ ಪಾಟೀಲ, ಸುರೇಶ ಬಳಗಾರ, ಡಿ.ಎಸ್. ಬಾಪುರೆ, ಅಶೋಕ ಹಾದಿ, ಹೊಳೆಬಸಪ್ಪ ಅಕ್ಕಿ, ಜಯಶ್ರೀ ಶ್ರೀಗಿರಿ, ಡಾ. ರಾಜಶೇಖರ ದಾನರಡ್ಡಿ, ಶರಣಪ್ಪ ಹೊಸಂಗಡಿ, ತಾಲೂಕು ಕಸಾಪ ಕೋಶಾಧ್ಯಕ್ಷೆ ಪಾರ್ವತಿ ಬೇವಿನಮರದ, ಸಹಕಾರ್ಯದರ್ಶಿ ಜ್ಯೋತಿ ಹೇರಲಗಿ ಮೊದಲಾದವರು ಹಾಜರಿದ್ದರು. ಮಂಜುನಾಥ ಜಕ್ಕಲಿ ನಿರೂಪಿಸಿದರು, ವಿಶ್ವನಾಥ ಬೇಂದ್ರೆ ವಂದಿಸಿದರು.