ಗ್ರಾಪಂ ಅಧಿಕಾರ ಕಸಿದರೆ, ಬಡವರ ಪಿಂಚಣಿ ನಿಲ್ಲಿಸಿದರೆ ಜೋಕೆ: ಸರ್ಕಾರಕ್ಕೆ ಕೋಟ ಎಚ್ಚರಿಕೆ

| Published : Jun 25 2025, 12:34 AM IST

ಗ್ರಾಪಂ ಅಧಿಕಾರ ಕಸಿದರೆ, ಬಡವರ ಪಿಂಚಣಿ ನಿಲ್ಲಿಸಿದರೆ ಜೋಕೆ: ಸರ್ಕಾರಕ್ಕೆ ಕೋಟ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿ ೯/೧೧ಗೆ ವಿಪರೀತ ಲಂಚದ ಆರೋಪ ಕೇಳಿ ಬರುತ್ತಿದೆ. ಕೇವಲ ಉಡುಪಿ ಪ್ರಾಧಿಕಾರ ಒಂದರಲ್ಲೇ ೧೦,೦೦೦ಕ್ಕೂ ಹೆಚ್ಚು ಕಡತಗಳು ನನೆಗುದಿಗೆ ಬಿದ್ದಿವೆ. ಈ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ತಕ್ಷಣ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಕೋಟ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಂವಿಧಾನದ ೭೩ನೇ ತಿದ್ದುಪಡಿಯ ಮುಖ್ಯ ಆಶಯದಂತೆ, ೯/೧೧ ನೀಡುವ ಅಧಿಕಾರ ಗ್ರಾಮ ಪಂಚಾಯಿತಿಗಳಿಗಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಹಕ್ಕನ್ನು ನಗರ ಪ್ರಾಧಿಕಾರಕ್ಕೆ ನೀಡಿದ್ದು, ಇದು ಸಂವಿಧಾನ ವಿರೋಧಿ ಕ್ರಮವಾಗಿದೆ. ಆದ್ದರಿಂದ ತಕ್ಷಣ ೯/೧೧ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.ಅವರು ಸೋಮವಾರ ಕೋಟ, ಕೋಟತಟ್ಟು, ಸಾಲಿಗ್ರಾಮ ಪಂಚಾಯಿತಿಗಳ ಎದುರು ನಡೆದ ಬಿಜೆಪಿಯ ಧರಣಿಯಲ್ಲಿ ಮಾತನಾಡಿದರು.ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರತಿ ೯/೧೧ಗೆ ವಿಪರೀತ ಲಂಚದ ಆರೋಪ ಕೇಳಿ ಬರುತ್ತಿದೆ. ಕೇವಲ ಉಡುಪಿ ಪ್ರಾಧಿಕಾರ ಒಂದರಲ್ಲೇ ೧೦,೦೦೦ಕ್ಕೂ ಹೆಚ್ಚು ಕಡತಗಳು ನನೆಗುದಿಗೆ ಬಿದ್ದಿವೆ. ಈ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ತಕ್ಷಣ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.ಅಲ್ಲದೇ ರಾಜ್ಯ ಸರ್ಕಾರ ರಾಜ್ಯದಲ್ಲಿ ೯ ಲಕ್ಷಕ್ಕೂ ಮೀರಿ ವೃದ್ಧಾಪ್ಯ ವೇತನ, ೧೪ ಲಕ್ಷ ಸಂಧ್ಯಾ ಸುರಕ್ಷಾ ಪುನರ್ ಪರಿಶೀಲಿಸುವ ಹೆಸರಲ್ಲಿ ಬಡವರ ಸಂಧ್ಯಾಕಾಲದ ಪಿಂಚಣಿ ತಡೆಹಿಡಿಯಲು ಹೊರಟಿದೆ. ಇಂತಹ ಬಡವರ ಪಿಂಚಣಿಯನ್ನು ಯಾವುದೇ ಕಾರಣಕ್ಕೆ ರದ್ದುಗೊಳಿಸದೆ, ತಮ್ಮ ಸರಕಾರ ಕೊಟ್ಟಿರುವ ಪರಿಶೀಲನಾ ಆದೇಶವನ್ನು ರದ್ದು ಮಾಡಬೇಕೆಂದು ಕೋಟ ಮನವಿ ಮಾಡಿದರು.ಆಳುವ ಪಕ್ಷದ ಶಾಸಕ ಬಿ.ಆರ್. ಪಾಟೀಲ್, ಗ್ರಾಪಂಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ವಸತಿ ಯೋಜನೆಯ ಮನೆ ನೀಡಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಬಡವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ ನಡವಳಿಕೆ ನಡೆದಿರಲಿಲ್ಲ. ತಕ್ಷಣ ವಸತಿ ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವವರ ಮೇಲೆ ಕ್ರಮ ಕೈಗೊಂಡು ವಿಶೇಷ ತನಿಖಾದಳದ ಮೂಲಕ ತನಿಖೆ ನಡೆಸಬೇಕೆಂದು ಕೋಟ ಆಗ್ರಹಿಸಿದರು.ಅಲ್ಲದೇ ಬಡವರಿಗೆ ತಲುಪಬೇಕಾದ ನಮೂನೆ ೫೦, ೫೩, ೫೭ ಮತ್ತು ೯೪ಸಿ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಅವಳಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಇಡೀ ರಾಜ್ಯದಾದ್ಯಂತ ವಿಸ್ತರಿಸುವ ಎಚ್ಚರಿಕೆ ನೀಡಿ ಸಮಸ್ಯೆಯನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬಿಜೆಪಿ ಮುತ್ತಿಗೆ ಹಾಕಲಿದೆ ಎಂದು ಕೋಟ ಎಚ್ಚರಿಸಿದರು.