ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜೀವನೋಪಾಯಕ್ಕಾಗಿ ಕೆಲಸ ಮಾಡಬೇಕು. ಅದಕ್ಕಾಗಿ ನೂರಾರು ಆಯ್ಕೆಗಳಿವೆ. ಸಮಾಜ ಸೇವೆಗೂ ನಾನಾ ದಾರಿಗಳಿವೆ. ಜನ ಕಲ್ಯಾಣಕ್ಕಾಗಿ ಸಾರ್ವಜನಿಕ ಸೇವೆ ಆಯ್ಕೆ ಮಾಡಿಕೊಳ್ಳಬೇಕು. ಸಾರ್ವಜನಿಕ ಆಡಳಿತ ಕ್ಷೇತ್ರ ಆಯ್ಕೆ ಮಾಡಿಕೊಂಡವರು ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ಹುಣಸೂರು ಉಪ ವಿಭಾಗಾಧಿಕಾರಿ ಎಚ್.ಬಿ. ವಿಜಯ್ ಕುಮಾರ್ ತಿಳಿಸಿದರು.ನಗರದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ಒಕ್ಕೂಟವು ಮಂಗಳವಾರ ಆಯೋಜಿಸಿದ್ದ ಸ್ವಾವಲಂಬನೆಯತ್ತ ಯುವ ಸಮುದಾಯ- ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಉಚಿತ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇದೆ. ಶಾಸಕಾಂಗ ಜಾರಿ ಮಾಡುವ ಯೋಜನೆಗಳು, ಶಾಸನಗಳನ್ನು ತಳ ಮಟ್ಟದಲ್ಲಿ ತಲುಪಿಸಲು ಸಾರ್ವಜನಿಕ ಸೇವೆ ಅಗತ್ಯವಾಗಿದೆ. ಅಧಿಕಾರಿಯಾಗಿ ಬಡತನ ನಿರ್ಮೂಲನೆ, ಸಾಕ್ಷರತೆ, ಪರಿಸರ ಅಭಿವೃದ್ಧಿ ಮಾಡಬಹುದಾಗಿದೆ. ಅಧಿಕಾರಿಗಳು ಸರ್ಕಾರ ಮತ್ತು ಜನರ ಸೇತುವೆಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.ಪ್ರತಿ ವಿದ್ಯಾರ್ಥಿಯೂ ಓದಿನೊಂದಿಗೆ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಸ್ಪಷ್ಟ ನಿರ್ಧಾರದೊಂದಿಗೆ ಕಠಿಣ ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ತಮ್ಮ ಗುರಿ ತಲುಪುವ ಕಡೆ ಲಕ್ಷ್ಯ ಇರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಾಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಸಿ. ಗುರುಸಿದ್ದಯ್ಯ ಮಾತನಾಡಿ, ಪ್ರಾಮಾಣಿಕತೆ, ಶ್ರದ್ಧೆ, ನಿರಂತರವಾದ ಪರಿಶ್ರಮ ಇದ್ದರೆ ಬದುಕಿನಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಿದರು.ಇದೇ ವೇಳೆ ಸಾಮಾನ್ಯ ಜ್ಞಾನ ಕುರಿತು ಲೇಖಕ ಡಾ.ಎಸ್.ವಿ. ವೆಂಕಟರಮಣಸ್ವಾಮಿ, ಮಾನಸಿಕ ಸಾಮರ್ಥ್ಯ ಕುರಿತು ಬೆಂಗಳೂರಿನ ಆಕ್ಟಿವ್ ಕೋಚಿಂಗ್ ಸೆಂಟರ್ ನಿರ್ದೇಶಕ ಮಂಜುನಾಥ್ ಬಾಡಗಿ ಹಾಗೂ ಸಾಮಾನ್ಯ ಜ್ಞಾನ ಕುರಿತು ಅನ್ ಅಕಾಡೆಮಿ ಉಪನ್ಯಾಸಕ ಶರಣಯ್ಯ ಭಂಡಾರಿಮಠ ಉಪನ್ಯಾಸ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್, ಐಕ್ಯೂಎಸಿ ನಿರ್ದೇಶಕ ಡಾ.ಕೆ.ಎನ್. ಅಮೃತೇಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್, ಕಾರ್ಯದರ್ಶಿ ಶೇಖರ್ ಇದ್ದರು. ಕಾತ್ಯಾಯಿಣಿ ನಿರೂಪಿಸಿದರು.ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಎಲ್ಲರಿಗೂ ಉದ್ಯೋಗ ದೊರೆಯುವುದಿಲ್ಲ. ಯುಪಿಎಸ್ಸಿ ಕಡಿಮೆ ಸಂಖ್ಯೆಯ ಉದ್ಯೋಗಕ್ಕೆ ಪರೀಕ್ಷೆ ನಡೆಸುತ್ತದೆ. ಅಗಾಧವಾದ ಸ್ಪರ್ಧೆ ಇದೆ. ಆದರೆ, ಸರ್ಧಾತ್ಮಕ ಪರೀಕ್ಷೆಗೆ ಪಡೆದ ಜ್ಞಾನ ಯಾವತ್ತೂ ವ್ಯರ್ಥವಾಗುವುದಿಲ್ಲ. ಜೀವನ ಎದುರಿಸುವ ಸ್ಥೈರ್ಯ ಮತ್ತು ಧೈರ್ಯವನ್ನು ಕೊಡುತ್ತದೆ.
- ಎಚ್.ಬಿ. ವಿಜಯ್ ಕುಮಾರ್, ಉಪ ವಿಭಾಗಾಧಿಕಾರಿ, ಹುಣಸೂರು