ಸಾರಾಂಶ
ಬೆಂಗಳೂರು : ಕೆಎಎಸ್ ಅಧಿಕಾರಿ ಶಿವಕುಮಾರ್ ಪತ್ನಿ ಚೈತ್ರಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಂಜಯನಗರದ ಸಮೀಪ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಸಿಬಿಗೆ ಆಯುಕ್ತರು ವಹಿಸಿದ್ದಾರೆ. ಸಿಸಿಬಿ ಎಸಿಪಿ ಪರಮೇಶ್ ಅವರಿಗೆ ತನಿಖೆಯ ಹೊಣೆಗಾರಿಕೆಯನ್ನು ಜಂಟಿ ಆಯುಕ್ತ (ಅಪರಾಧ) ನೀಡಿದ್ದಾರೆ.
ಆರ್ಎಂವಿ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ತಮ್ಮ ಕುಟುಂಬದ ಜತೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಉಪ ವಿಭಾಗಾಧಿಕಾರಿ (ಕೆಐಎಡಿಬಿ) ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಶಿವಕುಮಾರ್ ನೆಲೆಸಿದ್ದರು. ಮೇ 10ರಂದು ತಮ್ಮ ಮಕ್ಕಳ ಜತೆ ಕುಣಿಗಲ್ ತಾಲೂಕಿನಲ್ಲಿದ್ದ ತಮ್ಮ ತೋಟದ ಮನೆಗೆ ಶಿವಕುಮಾರ್ ತೆರಳಿದ್ದರು. ಆಗ ಮನೆಯಲ್ಲಿ ಏಕಾಂಗಿಯಾಗಿದ್ದ ಅವರ ಪತ್ನಿ ಚೈತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಚೈತ್ರಾ ಅವರ ಸಾವಿನ ಕುರಿತು ಮೃತರ ಸಂಬಂಧಿಕರು ಹಾಗೂ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದರು.