ಉಡುಪಿ: ಮಂಗಳವಾರ ಕೃಷ್ಣಾಂಗಾರಕ ಚತುರ್ದಶಿ ಪ್ರಯುಕ್ತ ಉಡುಪಿಯ ಜೀವ ನದಿಯಾದ ಸುವರ್ಣಾ ನದಿಯಲ್ಲಿ ಉಡುಪಿಯ ವಿವಿಧ ಮಠಾಧೀಶರು, ಶಾಸಕ ಯಶ್ಪಾಲ್ ಎ. ಸುವರ್ಣ ಮತ್ತಿತರ ನೂರಾರು ಮಂದಿ ಭಕ್ತರು ಪೆರಂಪಳ್ಳಿಯ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಮೀಪದ ಸ್ನಾನ ಘಟ್ಟದಲ್ಲಿ ಪವಿತ್ರ ಸ್ನಾನಗೈದರು.

ವಿಧಾನಸಭಾ ಬಜೆಟ್ ಅಧಿವೇಶನ ನಡೆಯುತ್ತಿದ್ದರೂ ಯಶ್ಪಾಲ್ ಎ. ಸುವರ್ಣ ಸೋಮವಾರ ರಾತ್ರಿಯೇ ಉಡುಪಿಗೆ ಬಂದು ನದಿ ತೀರದಲ್ಲಿ ಸ್ನಾನಗೈದು ಪ್ರಾರ್ಥನೆ ಸಲ್ಲಿಸಿ ಸೂರ್ಯನಿಗೆ ಅರ್ಘ್ಯ ಹಾಗೂ ತಮ್ಮ ಮಾತಾ ಪಿತರನ್ನು ಸ್ಮರಿಸಿ ತರ್ಪಣ ನೀಡಿದರು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಅವರು ಶಾಸಕರಿಗೆ ಸಂಕಲ್ಪ ವಿಧಿಗಳನ್ನು ತಿಳಿಸಿದರು. ಬಳಿಕ ಸಿದ್ಧಿವಿನಾಯಕ ದೇವರ ದರ್ಶನ ಪಡೆದ ಶಾಸಕರು ಅರ್ಚಕ ನವೀನ್ ಶಿವತ್ತಾಯರಿಂದ ಪ್ರಸಾದ ಸ್ವೀಕರಿಸಿದರು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ವಿದ್ಯಾರಾಜೇಶ್ವರ ತೀರ್ಥರು, ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು ಭಕ್ತರ ಜೊತೆ ಆಗಮಿಸಿ ನದಿ ಸ್ನಾನಗೈದರು. ಸಂಜೆ ನದಿಗೆ ಸುವರ್ಣಾರತಿಯನ್ನೂ ನಡೆಸಲಾಯಿತು. ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಗಳ ಆಶಯದಂತೆ ಶಾಸಕ‌ ಯಶ್ಪಾಲ್ ಸುವರ್ಣ ಅವರ ವಿಶೇಷ ಪ್ರಯತ್ನದಿಂದ ಸಣ್ಣ ನೀರಾವರಿ ಇಲಾಖೆಯ 2.25 ಕೋಟಿ ರು. ಅನುದಾನದಿಂದ ನೂತನ ಕೃಷ್ಣಾಂಗಾರಕ ಸ್ನಾನಘಟ್ಟ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಸಧ್ಯವೇ ಉದ್ಘಾಟನೆಗೊಳ್ಳಲಿದೆ.