ಸಾರಾಂಶ
ಕಾರವಾರ: ಗುಡ್ಡ ಕುಸಿತ ಪ್ರದೇಶಗಳಲ್ಲಿ ಕಂಡು ಬರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗುಡ್ಡ ಕುಸಿತದಿಂದಾಗುವ ಅನಾಹುತಗಳನ್ನು ತಡೆಯಲು ಸಾಧ್ಯ ಎಂದು ಜಿಎಸ್ಐನ ತಾಂತ್ರಿಕ ಅಧಿಕಾರಿ ಮಧುಸೂದನ್ ಹೇಳಿದರು.
ಅವರು ಬುಧವಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಭೂ ಕುಸಿತ ಪ್ರದೇಶಗಳ ಮೇಲ್ವಿಚಾರಣೆಗೆ ನೇಮಿಸಲಾಗಿರುವ ಸ್ಪಾಟರ್ ಗಳಿಗೆ ಆನ್ಲೈನ್ ಮೂಲಕ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಭೂಕುಸಿತಕ್ಕೆ ಮಳೆಯೇ ಪ್ರಮುಖ ಕಾರಣವಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಭೂಕುಸಿತಗಳು ಘಟನೆಗಳು ಸಂಭವಿಸುತ್ತವೆ. ಭೂಕುಸಿತಕ್ಕೆ ಪ್ರಕೃತಿದತ್ತವಾದ ಮತ್ತು ಮಾನವ ನಿರ್ಮಿತ ಅವೈಜ್ಞಾನಿಕ ನಿರ್ಮಾಣ ಚಟುವಟಿಕೆಗಳು ಸಹ ಕಾರಣವಾಗಿದೆ. ಕಡಿಮೆ ಸಮಯದಲ್ಲಿ ಸತತವಾಗಿ ಬೀಳುವ ಹೆಚ್ಚಿನ ಮಳೆಯಿಂದ ಮಣ್ಣಿನ ಸವಕಳಿ ಉಂಟಾಗಿ, ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳು ಹೆಚ್ಚಾಗಿ ಉಂಟಾಗುತ್ತವೆ ಎಂದರು.
ಎತ್ತರ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೇ ನೀರು ಅಲ್ಲಿಯೇ ಸಂಗ್ರಹವಾಗುವುದು ಕೂಡ ಭೂಕುಸಿತಕ್ಕೆ ಕಾರಣವಾಗುತ್ತದೆ. ಜೆಸಿಬಿಯನ್ನು ಉಪಯೋಗಿಸಿಕೊಂಡು ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕೊರೆದು ರಸ್ತೆ, ಮನೆಗಳನ್ನು ನಿರ್ಮಿಸುವುದರಿಂದ ಭೂಕುಸಿತ ಸಂಭವಿಸಲಿದೆ. ಸ್ಪಾಟರ್ಸಗಳು ಭೂಕುಸಿತದ ಪ್ರದೇಶದಲ್ಲಿ ಬಿರುಕಿನ ಲಕ್ಷಣಗಳು ಕಂಡು ಬಂದ ಸಮಯದಲ್ಲಿ ಕೂಡಲೇ ಈ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಬೇಕು. ರಸ್ತೆಗಳಲ್ಲಿ ಬಿರುಕುಗಳು ಕಂಡುಬಂದಲ್ಲಿ ರಾಷ್ಟ್ರೀಯ ಹೆದ್ದಾರಿ,ಲೋಕೋಪಯೋಗಿ ಇಲಾಖೆಗಳಿಗೆ ಮಾಹಿತಿಯನ್ನು ನೀಡಬೇಕು. ಅಂತಹ ರಸ್ತೆಯ ಮೇಲೆ ವಾಹನಗಳನ್ನು ವೇಗವಾಗಿ ಚಲಾಯಿಸಬಾರದು ಎಂದರು.ಭೂಕುಸಿತ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂಚೂಣಿಯಾಗಿ ಮಾಡಿಕೊಂಡಿದ್ದಲ್ಲಿ ಮಾನವ ಜೀವ ಹಾನಿ ಹಾಗು ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ತಡೆಯಬಹುದು. ಭೂ ಕುಸಿತ ಪ್ರದೇಶದ ಗುಡ್ಡ-ಬೆಟ್ಟಗಳ ಬಳಿ ನಿಂತು ಸಾರ್ವಜನಿಕರು ಫೋಟೋ, ವಿಡೀಯೋಗಳನ್ನು ತೆಗೆದುಕೊಳ್ಳಬಾರದು. ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ನೇಮಕ ಮಾಡಿರುವ ಸ್ಪಾಟರ್ ಗಳು ಸಾರ್ವಜನಿಕರ ಹಿತದೃಷ್ಠಿಯ ಜೊತೆಗೆ ತಮ್ಮ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.
ಮಳೆಗಾಲ ಆರಂಭಕ್ಕೂ ಮುನ್ನವೇ ಭೂಕುಸಿತದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಭೂಕುಸಿತದ ಅಪಾಯಗಳ ಬಗ್ಗೆ ಮನವರಿಕೆ ಮಾಡಬೇಕು. ಭೂ ಕುಸಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಗುಡ್ಡ ಕುಸಿತದ ಅಪಾಯದ ಬಗ್ಗೆ ಸೂಚನೆಗಳು ಬಂದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದರು.ಭೂಕುಸಿತ ಸಂಬಂಧಿಸಿದಂತೆ Bhooskhalan ಮೊಬೈಲ್ ಆಪ್ಲೀಕೇಶ್ನ್ ಬಳಕೆ ಮತ್ತು ಅದರ ಉಪಯೋಗದ ಬಗ್ಗೆ ಕಾರ್ಯಗಾರದಲ್ಲಿ ತಿಳಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿ.ಎಸ್.ಐ. ಸಂಸ್ಥೆಯಿಂದ ಈಗಾಗಲೇ 439 ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಬಗ್ಗೆ ಸಂಬಂದಪಟ್ಟ ಎಲ್ಲಾ ಇಲಾಖೆಗಳಿಗೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ. ಭೂ ಕುಸಿತ ಸ್ಥಳಗಳ ಬಗ್ಗೆ ನಿಗಾ ವಹಿಸಲು 220 ಸ್ಪಾಟರ್ ಗಳನ್ನು ನೇಮಕ ಮಾಡಲಾಗಿದ್ದು ಅವರಿಗೆ ಈಗಾಗಲೇ ಒಂದು ಸುತ್ತಿನ ತರಬೇತಿಯನ್ನು ನೀಡಲಾಗಿದ್ದು, ಪ್ರಸ್ತುತ 2 ನೇ ಸುತ್ತಿನ ತರಬೇತಿಯನ್ನು ಬುಧವಾರ ನೀಡಲಾಗಿದೆ.ಕಾರ್ಯಗಾರದಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು, ಈಗಾಗಲೇ ನೇಮಕಗೊಂಡಿರುವ ಸ್ಪಾಟರ್ ಗಳು, ಸಂಬಂದಪಟ್ಟ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಪಿಡಿಓ ಗಳು ಇದ್ದರು.