ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಕೀಲರನ್ನು ನ್ಯಾಯಾಲಯದ ಮುಂಭಾಗ ಬರ್ಬರವಾಗಿ ಹತ್ಯೆ ಮಾಡಿರುವ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರು ಸಭೆ ನಡೆಸಿ ನ್ಯಾಯಾಲಯದ ಕಲಾಪದಿಂದ ದೂರ ಉಳಿಯುವಂತೆ ತಿರ್ಮಾನಿಸಿದರು. ನಂತರ ತಾಲೂಕು ಕಚೇರಿವರೆಗೆ ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.
ನ.20ರಂದು ಹೊಸೂರು ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆಯುಧಗಳಿಂದ ವಕೀಲನನ್ನು ಜನರ ನಡುವೆಯೇ ಹತ್ಯೆ ಮಾಡಿದ್ದಾನೆ. ಈ ಹಿಂದೆಯೂ ವಕೀಲರ ಮೇಲೆ ಹಲ್ಲೆಗಳು, ಹಿಂಸೆಗಳು ನಡೆಯುತ್ತಲೇ ಬರುತ್ತಿವೆ. ವಕೀಲರ ಸಂರಕ್ಷಣಾ ಕಾಯಿದೆ ಜಾರಿ ಇದ್ದರೂ ಸಹ ವಕೀಲರಿಗೆ ಯಾವುದೇ ರಕ್ಷಣೆ, ಭದ್ರತೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ವಕೀಲರ ಸಂರಕ್ಷಣ ಕಾಯಿದೆಯನ್ನು ಪರಿಣಾಮಕಾರಿಯಾಗಿ ತಿದ್ದುಪಡಿಮಾಡಿ ವಕೀಲರುಗಳಿಗೆ ಹಲ್ಲೆ, ಹಿಂಸೆ ನಡೆಸಿದವರ ವಿರುದ್ಧ ಕಠಿಣ ಶಿಕ್ಷೆ ಜಾರಿಗೊಳಿಸುವಂತೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪವನ್ಗೌಡ, ಶಿವರಾಮು, ಸುಬ್ಬಣ್ಣ, ಸಿ.ಕೆ ಸೋಮು, ಮುಂಜುನಾಥ, ಕುಮಾರ್, ಮೂರ್ತಿ, ಸಿದ್ದೇಶ್, ನಾರಾಯಣಸ್ವಾಮಿ ಸೇರಿದಂತೆ ಇತರರು ಇದ್ದರು.