ಕನ್ನಡಪ್ರಭ ವಾರ್ತೆ ತುಮಕೂರು
ಈ ತಿಂಗಳ 9 ರಂದು ಚಿತ್ರದುರ್ಗದಲ್ಲಿ ಏರ್ಪಾಟಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ನಗರದ 32ನೇ ವಾರ್ಡಿನ ಬಿಜೆಪಿ ಮುಖಂಡರಿಂದ ಸಭೆ ಆಯೋಜಿಸಲಾಗಿತ್ತು.ಅಭಿಮಾನೋತ್ಸವದ ಆಹಾರ ಸಮಿತಿ ಉಸ್ತುವಾರಿ ವಹಿಸಿಕೊಂಡಿರುವ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ, ಕೃಷ್ಣಪ್ಪ, ಮುನಿರಾಜು, ಮುನಿರತ್ನ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಶಾಸಕ ಮುನಿರತ್ನ, ದಕ್ಷಣ ಭಾರತದಲ್ಲಿ ಬಿಜೆಪಿ ಬೆಳಗಲು ಪ್ರಮುಖ ಕಾರಣಕರ್ತರಾದ ಬಿ.ಎಸ್. ಯಡಿಯೂರಪ್ಪನವರ ಕೊಡುಗೆ ಅಪಾರ. ಪಕ್ಷ ಕಟ್ಟಲು ಅವರು ಸತತ 50 ವರ್ಷ ಕಾಲ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇವರು ಅಧಿಕಾರ ಅನುಭವಿಸಿದ್ದಕ್ಕಿಂಥಾ ಜನರ ಪರವಾಗಿ ಹೋರಾಟ ಮಾಡಿದ್ದೇ ಹೆಚ್ಚು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಜನರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಜನನಾಯಕರಾಗಿ ಜನರ ಹೃದಯದಲ್ಲಿರುವ ಹೋರಾಟಗಾರ ಯಡಿಯೂರಪ್ಪನವರ ಸೇವೆ ಸ್ಮರಿಸಿ ಅವರನ್ನು ಗೌರವಿಸಲು ಅಭಿಮಾನೋತ್ಸವ ಏರ್ಪಡಿಸಲಾಗಿದೆ. ಎಲ್ಲಾ ಜಿಲ್ಲೆಗಳಿಂದಲೂ ಹೆಚ್ಚು ಜನ ಭಾಗವಹಿಸಿ ಹಿರಿಯ ನಾಯಕರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.ಪ್ರಧಾನ ಮಂತ್ರಿ ನರೇಂದ್ರಮೋದಿಯವರು ವಿಶ್ವ ನಾಯಕ. ಸುಭದ್ರ, ಸಮೃದ್ಧ ಭಾರತ ನಿರ್ಮಾಣದ ದೂರದೃಷ್ಟಿ ನಾಯಕರಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಬಹುಮತ ಪಡೆದಿದೆ. ದೇಶದ ಬಹುಭಾಗದ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಎಂದರು.ಯಲಹಂಕ ಶಾಸಕ ವಿಶ್ವನಾಥ್ ಮಾತನಾಡಿ, ಈ ನಾಡು ಕಂಡ ರೈತನಾಯಕ,ಬಡವರ ಬಂದು ದೀನ ದಲಿತರ ಕಣ್ಮಣಿ ಭಾರತೀಯ ಜನತಾಪಕ್ಷ ಕರ್ನಾಟಕದಲ್ಲಿ ಕಟ್ಟಿ ಬೆಳಸಿದ ಮಾಜಿ ಮುಖ್ಯಮಂತ್ರಿ ಗಳು 50 ವರ್ಷದ ಸಾರ್ಥಕ ಬದುಕನ್ನು ಸವಿಸಿ ಲಕ್ಷಾಂತರ ಕಾರ್ಯಕರ್ತರನ್ನು ಬೆಳೆಸಿ,ಕರ್ನಾಟಕದ ರಾಜಕಾರಣದ ದೃವತಾರೆಯಾಗಿ ನಿಂತಿದ್ದಾರೆ. ಅವರಿಗೆ ಪಕ್ಷಾತೀತವಾಗಿ ಅಭಿನಂದನಾ ಮಹೋತ್ಸವ ಚಿತ್ರದುರ್ಗ ದಲ್ಲಿ ಹಮ್ಮಿ ಕೊಂಡಿದ್ದೇವೆ ತಾವೆಲ್ಲರೂ ಕಾರ್ಯಕ್ರಮ ಕ್ಕೆ ಆಗಮಿಸಬೇಕೆಂದು ಕರೆ ಕೊಟ್ಟರು.ಕಾರ್ಯಕ್ರಮ ಆಯೋಜನೆ ಮಾಡಿದ್ದ ತುಮಕೂರಿನ 32 ನೇ ವಾರ್ಡ್ ಬಿಜೆಪಿ ಮುಖಂಡರಾದ ಮರಿಬಸಪ್ಪ ಹಾಗೂ ಪ್ರೇಮ್ ಕುಮಾರ್ ಅವರು ಈ ವೇಳೆ ಬಿಜೆಪಿ ನಾಯಕರನ್ನು ಸನ್ಮಾನಿಸಿ ಗೌರವಿಸಿದರು.
