ಕನಕಪುರ: ನೀವೆಲ್ಲರೂ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿ ತರಬೇಕು ಎಂದು ಡಿಕೆಶಿ ಪುತ್ರಿ ಐಶ್ವರ್ಯ ಹೆಗಡೆ ಶುಭ ಹಾರೈಸಿದರು.

ಡಿಕೆಎಸ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ, ಕನ್ನಡ ಮಾತೆಗೆ ಪುಷ್ಪ ನಮನ ಸಲ್ಲಿಸಿ, ಧಾನ್ಯಗಳ ರಾಶಿ ಪೂಜೆ ಮಾಡಿ ಜನಪದ ವಸ್ತುಗಳ ಸಂಗ್ರಹಣೆ ಹಾಗೂ ನೂತನವಾಗಿ ನಿರ್ಮಿಸಿರುವ ಸಿಬ್ಬಂದಿ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಮೊದಲು ಕನ್ನಡ ಭಾಷೆಯನ್ನು ಕಲಿಯಬೇಕು. ಇದಕ್ಕೆ ಮನೆಯಲ್ಲಿ ಪೋಷಕರು ಸಹಕರಿಸಬೇಕು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಹಾಗಾಗಿ ತಾಯಂದಿರು ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಕಲಿಸಬೇಕು. ಮಕ್ಕಳಲ್ಲಿ ನಾಡು, ನುಡಿ, ನೆಲ, ಜಲದ ಮಹತ್ವವನ್ನು ತಿಳಿಸಬೇಕು. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಲ್ಲಿ ನಾಡು, ದೇಶದ ಬಗ್ಗೆ ಪ್ರೀತಿ, ಭಕ್ತಿ ಕಲಿಸಬೇಕು ಎಂದರು.

ಸಾಹಿತಿ ಕೂ.ಗಿ.ಗಿರಿಯಪ್ಪ ಮಾತನಾಡಿ, ಕನ್ನಡಿಗರಾದ ನಾವು ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ನಮ್ಮಭಾಷೆಯನ್ನು ಉಳಿಸಿ ಬೆಳೆಸಬೇಕಾದುದ್ದು ನಮ್ಮ ಆದ್ಯ ಕರ್ತವ್ಯ. ತಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ತಮ್ಮ ದೈನಂದಿನ ಜೀವನದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಎಳವೆಯಿಂದಲೇ ಮನೆ ಮತ್ತು ಶಾಲೆ ಎರಡು ಕಡೆಯೂ ನಾಡಪ್ರೇಮ, ಭಾಷಾಪ್ರೇಮ, ದೇಶಪ್ರೇಮ ಬೆಳೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥ ರೋಹಿತ್ ದೇಶಪಾಂಡೆ ಮತ್ತು ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಬನ್ಸಿ ವಾಸ್ವಾನಿ, ಪ್ರಾಂಶುಪಾಲರಾದ ಅಂತೋಣಿ ಮೇರಿ, ಶಿಕ್ಷಕ ಯಾಕುಬ್ ಪಾಷಾ, ಶಿಕ್ಷಕ ವರ್ಗ, ಚಾಲಕರು, ಸಹಾಯಕಿಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.


(ಫೋಟೋ ಕ್ಯಾಪ್ಷನ್‌)

ಕನಕಪುರದಲ್ಲಿ ಡಿಕೆಎಸ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಡಿಕೆಶಿ ಪುತ್ರಿ ಐಶ್ವರ್ಯ ಹೆಗಡೆ, ಸಾಹಿತಿ ಕೂ.ಗಿ.ಗಿರಿಯಪ್ಪ, ಶಾಲಾ ಮುಖ್ಯಸ್ಥ ರೋಹಿತ್ ದೇಶಪಾಂಡೆ ಇತರರು ಪಾಲ್ಗೊಂಡಿದ್ದರು.