ಕನ್ನಡಪ್ರಭ ವಾರ್ತೆ ಬೈಲಹೊಂಗಲಸದ್ಗುರುವನ್ನು ಶ್ರದ್ಧೆ, ಭಕ್ತಿಯಿಂದ ಒಲಿಸಿಕೊಳ್ಳುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಇದರಿಂದ ಎಲ್ಲವೂ ಪ್ರಾಪ್ತಿಯಾಗುತ್ತದೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಸಮೀಪದ ಮುರಕೀಭಾವಿ ಗ್ರಾಮದ ಸಿದ್ಧಾರೂಢರ ಜಾತ್ರಾ ಮಹೋತ್ಸವ ಅಂಗವಾಗಿ 36ನೇ ವೇದಾಂತ ಪರಿಷತ್‌ ಯೋಗಿಯನೊಲಿಸಿದೊಡೆ ಇಹಪರ ಸಿದ್ಧಿ ವಿಷಯ ಕುರಿತು ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಯೋಗಿಯ ಸೇವೆ ಮಾಡುವುದರಿಂದ ಜೀವನ ಪಾವನವಾಗುತ್ತದೆ. ಗುರುವಿನ ಕೃಪೆಯಾದರೆ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಸಿದ್ಧಾರೂಢ ಸ್ವಾಮೀಜಿಯವರ ಪವಾಡಗಳು ವಿಶಿಷ್ಟವಾದವುಗಳಾಗಿದ್ದವು. ಪುಣ್ಯ ಕಾರ್ಯಕ್ಕೆ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಹುಬ್ಬಳ್ಳಿಯ ಜಡಿ ಮಠದ ರಾಮಾನಂದ ಸ್ವಾಮೀಜಿ ಗುರುವನ್ನು ವಂದಿಸಿ, ಪೂಜಿಸಿ, ಭಕ್ತಿ ಭಾವದಿಂದ ನಮಸ್ಕರಿಸಿದರೆ ಜೀವನವು ಪಾವನವಾಗುತ್ತದೆ ಎಂದರು.ನಿತ್ಯಾನಂದ ಸ್ವಾಮೀಜಿ ಮಾತನಾಡಿ, ಸದ್ಗುರುವಿನ ಸೇವೆ ಮಾಡಿದರೆ ಗುರು ಜೀವನದಲ್ಲಿ ಬರುವ ಎಲ್ಲ ಕಷ್ಟಗಳನ್ನು ಪರಿಹಿಸುತ್ತಾನೆ ಎಂದರು.

ಇಂಚಲದ ಪೂರ್ಣಾನಂದ ಸ್ವಾಮೀಜಿ, ಶಿವಾನಂದ ಶರಣರು ಇದ್ದರು. ಡಾ.ಶಿವಾನಂದ ಭಾರತಿ ಸ್ವಾಮೀಜಿಗಳ ತೊಟ್ಟಿಲೋತ್ಸವ ಹಾಗೂ ಕಿರೀಟ ಪೂಜೆ ನೆರವೇರಿತು.