ಸಾರಾಂಶ
ಮೂಡುಬಿದಿರೆ: ಪ್ರೇಮ ವೈಫಲ್ಯದಿಂದ ವಿಚಲಿತನಾದ ಯುವಕನೊಬ್ಬ ಮೂಡುಬಿದಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ಕಾಲೇಜಿನ ಕ್ಲಾಸ್ ರೂಮಲ್ಲೇ ಕತ್ತರಿಯಿಂದ ಇರಿದ ಘಟನೆ ಸೋಮವಾರ ನಡೆದಿದೆ.
ವಿದ್ಯಾರ್ಥಿನಿ ಗಾಯಗೊಂಡಿದ್ದು, ಮಂಜುನಾಥ ಈ ಪ್ರಕರಣದ ಆರೋಪಿಯಾಗಿದ್ದಾನೆ. ಇವರಿಬ್ಬರೂ ತುಮಕೂರು ಮೂಲದವರಾಗಿದ್ದಾರೆ.ಪಿಯುಸಿವರೆಗೆ ಕ್ಲಾಸ್ ಮೇಟ್ ಆಗಿದ್ದ ಇಬ್ಬರ ನಡುವೆ ಲವ್ ಇತ್ತು ಎನ್ನಲಾಗಿದೆ. ಬಳಿಕ ಮಂಜುನಾಥ ಕಾಲೇಜು ಬಿಟ್ಟಿದ್ದು ವಿದ್ಯಾರ್ಥಿನಿ ಕಾಲೇಜು ಮುಂದುವರಿಸಿದ್ದಳು. ಇವರಿಬ್ಬರ ನಡುವಿನ ಪ್ರೇಮದ ಬಗ್ಗೆ ಮನೆಮಂದಿಗೆ ಗೊತ್ತಾಗಿ ಹೆತ್ತವರು ಹುಡುಗಿಗೆ ಬುದ್ಧಿವಾದ ಹೇಳಿದ್ದಾರೆ. ಈ ಬೆಳವಣಿಗೆಯಿಂದ ಕುಪಿತನಾದ ಮಂಜುನಾಥ ಎರಡು ದಿನಗಳ ಹಿಂದೆ ಮೂಡುಬಿದಿರೆಗೆ ಬಂದು ಲಾಡ್ಜಲ್ಲಿ ತಂಗಿದ್ದಾನೆ. ಸೋಮವಾರ ಬೆಳಗ್ಗೆ ವಿದ್ಯಾರ್ಥಿನಿಯ ಕ್ಲಾಸ್ ಗೆ ಕತ್ತರಿಯೊಂದಿಗೆ ನುಗ್ಗಿದ ಮಂಜುನಾಥ ಆಕೆಗೆ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾಳೆ. ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.ಹಲ್ಲೆ, ಜೀವಬೆದರಿಕೆ ಆರೋಪ: ದೂರು ದಾಖಲು
ಬಂಟ್ವಾಳ: ಕರಿಯಂಗಳ ಗ್ರಾಮದಲ್ಲಿ ದಂಪತಿಯೊಬ್ಬರು ತಂದೆ- ಮಗನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.ಕರಿಯಂಗಳ ಗ್ರಾಮ ನಿವಾಸಿ ಪದ್ಮನಾಭ ಹಾಗೂ ಆತನ ಪತ್ನಿ ಪ್ರಕರಣದ ಆರೋಪಿಗಳಾಗಿದ್ದು, ಇವರ ವಿರುದ್ಧ ಉಸ್ಮಾನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಉಸ್ಮಾನ್ ಮನೆಯಲ್ಲಿದ್ದ ವೇಳೆ ಪಕ್ಕದ ಮನೆಯ ಆರೋಪಿ ದಂಪತಿಯು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಜತೆಗೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ತನ್ನ ಪುತ್ರ ತಸ್ರೀಫ್ಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಸ್ಮಾನ್ ವಿರುದ್ಧ ದಂಪತಿಯೂ ದೂರು ನೀಡಿದ್ದು, ಪ್ರತಿದೂರು ದಾಖಲಾದಿದೆ.