ಮಡಿಕೇರಿ: ಡಿಸೆಂಬರ್ 29, 30ರಂದು ಜಾಗತಿಕ ಕೊಡವ ಸಮ್ಮೇಳನ

| Published : Dec 27 2023, 01:32 AM IST

ಸಾರಾಂಶ

ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಡಿ.29, 30ರಂದು ಮಡಿಕೇರಿಯಲ್ಲಿ ಕೊಡವ ಸಮ್ಮೇಳನ ‘ಗ್ಲೋಬಲ್ ಕೊಡವ ಸಮ್ಮಿಟ್’ ನಡೆಯಲಿದೆ. ವಿವಿಧ ಸಮಾವೇಶ, ಪ್ರದರ್ಶನ, ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿವಿಶ್ವದೆಲ್ಲಡೆ ಇರುವ ಕೊಡವ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಡಿ.29, 30ರಂದು ಮಡಿಕೇರಿಯಲ್ಲಿ ಕೊಡವ ಸಮ್ಮೇಳನ ‘ಗ್ಲೋಬಲ್ ಕೊಡವ ಸಮ್ಮಿಟ್’ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ನಿರನ್ ನಾಚಪ್ಪ, ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದರು.ಡಿ.29ರಂದು ಬೆಳಗ್ಗೆ 11.45ಕ್ಕೆ ಗಣ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷರು, ದೇಶ ತಕ್ಕರಾದ ಪರದಂಡ ಸುಬ್ರಮಣಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಬುದ್ಧ ಸಿದ್ಧಿ, ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಸಚಿವಾಲಯದ ಮುಖ್ಯ ಸಲಹೆಗಾರರಾದ ಡಾ.ಚೇತನ್ ಸಿಂಫ್ಟ್, ರಶ್ಮಿ ಸಮಂತ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟೀರ ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಆತ್ಮನಿರ್ಭರ ಅಧ್ಯಕ್ಷೆ ಕುಪ್ಪಂಡ ಛಾಯಾ ನಂಜಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತ ಪೂವಯ್ಯ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ನೂತನ ಖಾಸಗಿ ಬಸ್ ನಿಲ್ದಾಣದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದ ವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಎಲ್ಲ ಕೊಡವ ಸಮಾಜ, ಸಂಘ, ಸಂಸ್ಥೆ, ತಕ್ಕ ಮುಖ್ಯಸ್ಥರು ಸೇರಿದಂತೆ ವಿಶ್ವಾದ್ಯಂತ ನೆಲೆಸಿರುವ ಕೊಡವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳಲಿದ್ದು, ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮನೆತನದ ಕುಟುಂಬಗಳ ಬಾವುಟಗಳು ಆಕರ್ಷಿಸಲಿವೆ. ಕಾರ್ಯಕ್ರಮದಲ್ಲಿ ಆರೋಗ್ಯ ರಕ್ಷಣೆ ಮತ್ತು ಸುಧಾರಣೆ ಸಮಾವೇಶ ನಡೆಯಲಿದ್ದು, ಖ್ಯಾತ ಆಧ್ಯಾತ್ಮಿಕ ವಿಜ್ಞಾನಿ ಬೊಪ್ಪಂಡ ರಶ್ಮಿ ಅಯ್ಯಪ್ಪ ಜನರ ಆರೋಗ್ಯ ರಕ್ಷಣೆಯ ವಿಚಾರವಾಗಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ ಎಂದರು.ಅಲ್ಲದೇ ನಾಡ ಮಣ್ ನಾಡ ಕೂಳ್ ಸಮಾವೇಶ ನಡೆಯಲಿದ್ದು, ಡಾ.ಚೆಪ್ಪುಡಿರ ಜಿ.ಕುಶಾಲಪ್ಪ ನೇತೃತ್ವದಲ್ಲಿ ಕೊಡಗಿನಲ್ಲಿನ ಕೊಡವರ ಆಸ್ತಿ ಮಾರಾಟ ತಡೆ ಮತ್ತು ನಮ್ಮ ಆಚರಣೆಗಳು ಹಾಗೂ ಸಂಸ್ಕೃತಿಗೆ ಹಾಸುಹೋಕ್ಕಾಗಿರುವ ಕೃಷಿಯನ್ನು ಮುಂದುವರಿಸಲು ಪರ್ಯಾಯ ಮಾರ್ಗಗಳ ಅನ್ವೇಷಣೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.ದೇಶ ತಕ್ಕರೊಂದಿಗೆ ವಿಚಾರ ವಿಮರ್ಶೆ ನಡೆಯಲಿದ್ದು, ಕೊಡವ ನಾಡಿನ 8 ದೇಶ ತಕ್ಕರನ್ನೊಳಗೊಂಡ ಈ ಸಮಾವೇಶದಲ್ಲಿ ಕೊಡವರಲ್ಲಿ ಆದಿಕಾಲದಿಂದಲೂ ಬಂದ ತಕ್ಕಾಮೆ ಪದ್ಧತಿಯ ವೈಶಿಷ್ಟ್ಯತೆ ಮತ್ತು ತಕ್ಕಾಮೆಯ ಮಹತ್ವ, ಜವಾಬ್ದಾರಿಗಳ ಬಗ್ಗೆ ಮಾತುಕತೆ ನಡೆಯಲಿದೆ.

* ಸಾಂಸ್ಕೃತಿಕ ಕಾರ್ಯಕ್ರಮ, ಶಾಫಿಂಗ್‌ ಫೆಸ್ಟ್‌ವ್ಯಾಪಾರ ವ್ಯವಹಾರಗಳಲ್ಲಿ ಕೊಡವ ಜನಾಂಗದವರನ್ನು ಉತ್ತೇಜಿಸುವ ಸಲುವಾಗಿ ಖ್ಯಾತ ಉದ್ಯಮಿ ಪುಗ್ಗೇರ ದೇವಯ್ಯ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದ ಅವರು, ಎರಡು ದಿನಗಳ ಸಮ್ಮೇಳನದ ಉದ್ದಕ್ಕೂ ಸುಮಾರು 40 ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸುಮಾರು 600 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರೊಂದಿಗೆ ಫುಡ್ ಮತ್ತು ಶಾಪಿಂಗ್ ಫೆಸ್ಟ್ ಆಕರ್ಷಣೆಯಾಗಲಿದ್ದು, ಸುಮಾರು 60 ಮಳಿಗೆಗಳು ಈಗಾಗಲೇ ನೋಂದಾಯಿಸಿಕೊಂಡಿದೆ. ಇದಲ್ಲದೆ ಕೊಡವ ಭಾಷಾ ಪುಸ್ತಕ ಮಾರಾಟ ಮಳಿಗೆಯೂ ಇರಲಿದೆ.

* ಸಂಸ್ಕೃತಿ ಪ್ರದರ್ಶನಮದುವೆ ಸಂಬಂಧಗಳ ಜೋಡನೆಗೆ ತಂದು- ಬೆಂದು ಬಿಡಾರದಲ್ಲಿ ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಮುಂದಾಳತ್ವದಲ್ಲಿ ಸಿದ್ಧತೆ ನಡೆದಿದ್ದು, ಕೊಡವರ ಐನ್‌ಮನೆ ನಿರ್ಮಾಣ ಮಾಡಿ ಕೊಡವರ ದೈನಂದಿನ ಬದುಕಿಗೆ ನಂಟಾಗಿರುವ ವೈಶಿಷ್ಟ್ಯ ಪೂರ್ಣ ಮಾಹಿತಿಯ ವೀಕ್ಷಣೆ ಮತ್ತು ಅರಿವು ಮೂಡಿಸುವ ಪಡಿಪು ಕೈಯ್ಯಾಲೆಯ ಮೂಲಕ ಮರೆಯಾಗುತ್ತಿರುವ ಕೊಡವರ ಶ್ರೀಮಂತ ಸಂಸ್ಕೃತಿ, ಪರಂಪರೆಯ ಪ್ರದರ್ಶನವಿರುತ್ತದೆ. ಹಳೆಯ ಕಾಲದ ವಸ್ತುಗಳ ಮ್ಯೂಸಿಯಂ ಕೂಡ ಅಲ್ಲಿ ವೀಕ್ಷಣೆಗೆ ಸಿಗಲಿವೆ.ಡಿ.30ರಂದು ಸಾಂಪ್ರದಾಯಿಕ ಕೊಡವ ನೃತ್ಯ ಹಾಗೂ ಹಾಡು ಸ್ಪರ್ಧೆ ನಡೆಯಲಿದ್ದು, 25 ರಿಂದ 30 ತಂಡಗಳ ದಾಖಲೆಯ ನೋಂದಣಿಯಾಗಿದೆ.

* ವಿವಿಧ ಸಮಾವೇಶಕೊಡವರ ಆಚಾರ, ವಿಚಾರ, ಪದ್ಧತಿ, ಪರಂಪರೆಯ ವಿಷಯವಾಗಿ ಸಾಂಸ್ಕೃತಿಕ ಸಮಾವೇಶ ನಡೆಯಲಿದ್ದು, ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುವ ಸಲುವಾಗಿ ತೀತಮಾಡ ಅರ್ಜುನ್ ದೇವಯ್ಯ ಮತ್ತು ಮೆ.ಜನರಲ್ ಮುಕ್ಕಾಟಿತ ದೇವಯ್ಯ ಅವರಿಂದ ಕ್ರೀಡಾ ಸಮಾವೇಶ ನಡೆಯಲಿದೆ. ಅಲ್ಲದೇ ನಾಗರಿಕ ಸೇವೆ ಮತ್ತು ಡಿಫೆನ್ಸ್ ಸಮಾವೇಶ, ಎಲ್ಲ ಕೊಡವ ಸಮಾಜಗಳ ಅಧ್ಯಕ್ಷರ ಸಮಾವೇಶ, ಗನ್ ಸಮಾವೇಶ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಡಿಜೆ ನೈಟ್ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ ಎಂದರು.ಕಾರ್ಯಕ್ರಮದಲ್ಲಿ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸಂತ ಜೋಸೆಫರ ಶಾಲೆ ಹಾಗೂ ಐಟಿಐ ಕಾಲೇಜಿನ ಸಮೀಪ ವಾಹನ ನಿಲುಕಡೆಗೆ ಸ್ಥಳ ಗುರುತಿಸಲಾಗಿದ್ದು, ಆಮಿಸುವ ಎಲ್ಲರಿಗೂ ನಿಗದಿತ ಸ್ಥಳದಿಂದಲೇ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಟ್ರಸ್ಟ್‌ ಪ್ರಮುಖರಾದ ಚೇಂದಂಡ ಶಮ್ಮಿ ಮಾದಯ್ಯ, ನಿರ್ದೇಶಕರಾದ ಅಮಿತ್ ಭೀಮಯ್ಯ, ಬೊಳ್ಳೇರ ಪೃಥ್ವಿ ಪೂಣಚ್ಚ, ಮಂದೇಂಗಡ ನಿರನ್ ಸೋಮಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.