24ರಿಂದ ಮಲೆನಾಡ ಕರಕುಶಲ ಉತ್ಸವ ಫಲಪುಷ್ಪ ಪ್ರದರ್ಶನ

| Published : Jan 22 2025, 12:30 AM IST

24ರಿಂದ ಮಲೆನಾಡ ಕರಕುಶಲ ಉತ್ಸವ ಫಲಪುಷ್ಪ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ದೊಡ್ಡ ಮಟ್ಟದ ಮಲೆನಾಡ ಕರಕುಶಲ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನವನ್ನು ಜ.24ರಿಂದ ಮೂರು ದಿನಗಳ ಕಾಲ ನಗರದ ಅಲ್ಲಮಫ್ರಭು ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿ.ಪಂ ಸಿಇಒ ಎನ್.ಹೇಮಂತ್ ತಿಳಿಸಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ದೊಡ್ಡ ಮಟ್ಟದ ಮಲೆನಾಡ ಕರಕುಶಲ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನವನ್ನು ಜ.24ರಿಂದ ಮೂರು ದಿನಗಳ ಕಾಲ ನಗರದ ಅಲ್ಲಮಫ್ರಭು ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿ.ಪಂ ಸಿಇಒ ಎನ್.ಹೇಮಂತ್ ತಿಳಿಸಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 75ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಇವರ ಸಹಯೋಗದಲ್ಲಿ ಜ.24ರಿಂದ 26ರವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರಗೆ ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಪುಷ್ಪಸಿರಿ ಹೆಸರಿನಲ್ಲಿ 62ನೇ ಫಲ-ಪುಷ್ಪ ಪ್ರದರ್ಶನ, ಮಲೆನಾಡು ಕರಕುಶಲದ ಸರಸ್ ಮೇಳ ಉತ್ಸವ ಹಾಗೂ ಮನರೇಗಾ ಯೋಜನೆಯ ಮಾಹಿತಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ ಯೋಜನೆಯಡಿ ಶಿವಮೊಗ್ಗ ಜಿಲ್ಲಾ ಪಂಚಾಯತಿಯು “ಕ್ರಾಫ್ಟ್ ಆಫ್ ಮಲೆನಾಡು” ಎಂಬ ಬ್ರಾಂಡ್ ಮೂಲಕ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಂದು ಬೃಹತ್ ಅವಕಾಶವನ್ನು ನೀಡಲಾಗಿದೆ. ತಮ್ಮ ಆಸೆ, ಕನಸುಗಳನ್ನು ದೊಡ್ಡ ಮಟ್ಟದಲ್ಲಿ ಕಾಣಲು ಇಲ್ಲಿ ವೇದಿಕೆ ಸಜ್ಜಾಗಿದ್ದು, ಈಗ ನಗರದಲ್ಲಿ ಸ್ವಸಹಾಯ ಸದಸ್ಯರಿಗೆ ತಮ್ಮ ತಮ್ಮ ಪ್ರತಿಭೆಗಳನ್ನು ಮತ್ತು ಕುಶಲಕರ್ಮಿ ಶ್ರೇಷ್ಠತೆಯನ್ನು ಮಾರುಕಟ್ಟೆ ಒದಗಿಸಲು ಸದಾವಕಾಶ ಒದಗಿ ಬಂದಿದೆ ಎಂದು ಹೇಳಿದರು.“ಕ್ರಾಫ್ಟ್ ಆಫ್ ಮಲೆನಾಡು” ಮಹಿಳೆಯರ ಸ್ವಾವಲಂಬಿ ಬದುಕನ್ನು ಕಟ್ಟಿಕೊಡಲು ಸಜ್ಜಾಗಿದ್ದು, ಈ ಸುವರ್ಣಾವಕಾಶವನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ವರ್ತಮಾನದಲ್ಲಿ ಇಡೀ ಜಗತ್ತನ್ನು ಬೆರಳ ತುದಿಯಲ್ಲಿ ಕಾಣುವಂತಾಗಿದೆ. ಉಡುಗೆ, ತೊಡುಗೆ, ಆಹಾರವೆಲ್ಲವೂ ಅಂತರ್ಜಾಲದ ಅಧೀನದಲ್ಲಿದೆ. ಆದರೆ ಹಳ್ಳಿಗಳು ಹಾಗೂ ಹಳ್ಳಿಗಳಲ್ಲಿ ತಯಾರಾದ ವಸ್ತುಗಳು ಮಾತ್ರ ಇನ್ನೂ ತನ್ನದೇ ಆದ ಬಲೆ ಎಣೆದುಕೊಂಡು ಬದುಕುತ್ತಿವೆ. ಅದನ್ನು ತೊಡೆದು ಹಾಕಲು ಈ ಕ್ರಾಫ್ಟ್ ಆಫ್ ಮಲೆನಾಡು ಮುಂದಾಗಿದ್ದು, ಆನ್‌ಲೈನ್‌ ಮಾರುಕಟ್ಟೆಯ ಮೂಲಕ ಹಳ್ಳಿಗಳಲ್ಲಿ ತಯಾರಿಸಿರುವ ವಸ್ತುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.ಇನ್ನೂ ಜಿಲ್ಲಾ ಮಟ್ಟದಲ್ಲಿ ಮಲೆನಾಡ ಕರಕುಶಲ ಉತ್ಸವವನ್ನು ಆಯೋಜಿಸಿ ಮಹಿಳೆಯರು ತಯಾರಿಸಿದ ಮಲೆನಾಡಿನ ಹಸೆ ಚಿತ್ತಾರ, ಟೆರಾಕೋಟಾ ಶಿಲ್ಪಗಳ ಉತ್ಪನ್ನಗಳು, ಗುಡಿ ಕೈಗಾರಿಕೆ ಮತ್ತು ವೈರ್ಬ್ಯಾಗ್, ವಿವಿಧ ವಿನ್ಯಾಸ ಕಲೆ ಚಿತ್ತಾರ, ಗೃಹ ಅಲಂಕಾರ ವಸ್ತುಗಳು ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಸುವರ್ಣಾವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.ಮೊದಲ ಹಂತದಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಈ ಮೇಳ, ಎರಡನೇ ಹಂತದಲ್ಲಿ ವೆಬ್‌ಸೈಟ್ ಸಿದ್ಧಪಡಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಹಾಗೂ ಮೂರನೇ ಹಂತದಲ್ಲಿ ಇವರ ಉತ್ಪನ್ನಗಳ ಮಾರಾಟಕ್ಕೆ ಸ್ಟೋರ್ ತೆರೆಯುವ ಯೋಜನೆ ಇದೆ ಎಂದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವ-ಸಹಾಯ ಸಂಘದ ಸದಸ್ಯರಿಗೆ ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣ ಮತ್ತು ಸ್ವ-ಸಹಾಯ ಸಂಘದ ಕಾರ್ಯಚಟುವಟಿಕೆಗಳಿಗೆ ಎನ್.ಆರ್.ಎಲ್.ಎಂ ಶೆಡ್ ನಿರ್ಮಾಣ ಮಾಡಲಾಗುತ್ತದೆ. ನರೇಗಾ ಯೋಜನೆಯಡಿ, ತೋಟಗಾರಿಕೆ ಇಲಾಖೆಯಡಿ ಗ್ರಾಮೀಣ ಭಾಗದ ರೈತರಿಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ ತೋಟ, ಕಾಳು ಮೆಣಸು, ಎಲೆ ಬಳ್ಳಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ, ಎನ್.ಆರ್.ಎಲ್.ಎಂ ಯೋಜನೆ ಮತ್ತು ತೋಟಗಾರಿಕೆ ಇಲಾಖೆಯಡಿ ನೀಡಲಾಗುವ ಸೌಲಭ್ಯಗಳು ಕುರಿತು ಅರಿವು ಮೂಡಿಸಲು ಮೇಳ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.ಇದೇ ವೇಳೆ “ಕ್ರಾಫ್ಟ್ ಆಫ್ ಮಲೆನಾಡು” ಬ್ರಾಂಡಿಂಗ್ ಕುರಿತಾದ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಜಿ.ಸವಿತಾ, ಜಿಲ್ಲಾ ಉದ್ಯಾನ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಇದ್ದರು.ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ

ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದೆ. ಪ್ರದರ್ಶನದಲ್ಲಿ ಒಟ್ಟು 34 ವಿವಿಧ ಉತ್ಪನ್ನಗಳ ಹಾಗೂ ವಿವಿಧ ಇಲಾಖೆಗಳ ಮಳಿಗೆಗಳು ಇರಲಿವೆ. ಹೊರಗೆ 25 ಮಳಿಗೆಗಳನ್ನು ಸ್ಥಾಪಿಸಲಾಗುವುದು. ರೈತರ ವಿಶೇಷ ಬೆಳೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಜಿ.ಪಂ ಸಿಇಒ ಎನ್.ಹೇಮಂತ್ ತಿಳಿಸಿದರು.

ಶಿವಮೊಗ್ಗದ ಹೆಸರಾಂತ ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಮನೆಯನ್ನು ಪುಷ್ಪಗಳ ಮೂಲಕ ತಯಾರಿ ಮಾಡಿದ್ದು, ಸುಮಾರು 28 ಅಡಿ ಎತ್ತರದ ಹೂವಿನ ಕಲಾಕೃತಿಯ ಕವಿಶೈಲವನ್ನು ನಿರ್ಮಾಣ ಮಾಡಲಾಗುವುದು. ಚಂದ್ರಗುತ್ತಿಯ ರೇಣುಕಾ ದೇವಾಲಯವನ್ನು ಮರುಸೃಷ್ಟಿಸಲಾಗುತ್ತಿದ್ದು, ಪ್ರದರ್ಶನದ ಆಕರ್ಷಣೆಯಾಗಲಿದೆ ಎಂದರು.ಈ ಫಲಪುಷ್ಪ ಉತ್ಸವದಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರು ತಯಾರಿಸಿದ 100ಕ್ಕೂ ಹೆಚ್ಚು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಆತ್ಮೀಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉತ್ಸವದಲ್ಲಿ ಭಾಗವಹಿಸಿ ಈ ಅದ್ಭುತ ಪ್ರದರ್ಶನವನ್ನು ಆನಂದಿಸಬೇಕೆಂದು ಅವರು ಕೋರಿದರು.