ಕನ್ನಡಪ್ರಭ ವಾರ್ತೆ ಬೆಳಗಾವಿ

ಪಶ್ಚಿಮ ಘಟ್ಟ ಮತ್ತು ಖಾನಾಪುರದ ಕಣಕುಂಬಿ ಅರಣ್ಯಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿಗೆ ಜೀವಕಳೆ ಬಂದಿದೆ. ನದಿ ತುಂಬಿ ಹರಿಯುತ್ತಿರುವ ಪರಿಣಾಮ, ನದಿ ತಟದಲ್ಲಿರುವ ಹಬ್ಬಾನಟ್ಟಿ ಗ್ರಾಮದ ಹೊರವಲಯದ ಪುರಾತನ ಮಾರುತಿ ಮಂದಿರ ಭಾಗಶಃ ಜಲಾವೃತಗೊಂಡಿದೆ.

ಮಾರುತಿ ಮಂದಿರದ ಗರ್ಭಗುಡಿ ಸೇರಿದಂತೆ ರಾಮ, ಲಕ್ಷ್ಮಣ, ಸೀತಾ ಮೂರ್ತಿಗಳ ಕತ್ತಿನವರೆಗೆ ನೀರು ಬಂದಿದೆ. ಇಲ್ಲೇ ಇರುವ ಶಿವನ ಮಂದಿರ ಕೂಡ ಈಗಾಗಲೇ ನೀರಿನಲ್ಲಿ ಮುಳುಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ದೇವಾಲಯವು ಮುಳುಗಡೆಯಾಗುವುದು ಸಾಮಾನ್ಯವಾಗಿದ್ದು, ಕೆಲವೊಮ್ಮೆ ನಾಲ್ಕು ತಿಂಗಳ ಕಾಲ ನೀರು ಖಾಲಿ ಆಗುವುದಿಲ್ಲ. ನಿರಂತರ ಮಳೆ ಆಗುತ್ತಿರುವುದರಿಂದ ದೇವಾಲಯ ಸಂಪೂರ್ಣವಾಗಿ ಮುಳುಗಡೆಯಾಗುವ ಸಾಧ್ಯತೆ ಇದೆ.