ಮಾದಕ ವಸ್ತು ತಡೆ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ

| Published : Mar 30 2025, 03:04 AM IST

ಸಾರಾಂಶ

ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ವಿದ್ಯಾರ್ಥಿಗಳು, ಪೊಲೀಸರು ಮತ್ತು ಬೆಳ್ತಂಗಡಿ ತಾಲೂಕಿನ ನಾಗರಿಕರಿಂದ ‘ಮಾದಕ ವಸ್ತು ತಡೆ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ’ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಳೆದ ಕೆಲ ವರ್ಷಗಳಲ್ಲಿ ನಗರಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಹಾವಳಿ ಇಂದು ಜಿಲ್ಲಾ ಮಟ್ಟ, ತಾಲೂಕು ಮಟ್ಟ, ಗ್ರಾಮ ಮಟ್ಟದವರೆಗೆ ತಲುಪಿರುವುದು ಆತಂಕಕಾರಿ ವಿಷಯವಾಗಿದೆ. ಯುವ ಜನತೆ ದುಶ್ಚಟಗಳ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸಿ, ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಪ್ರಸ್ತುತವಾಗಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹೇಳಿದರು.

ಅವರು ಮಾ.29ರಂದು ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಪೊಲೀಸರ ನೇತೃತ್ವದಲ್ಲಿ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಗುರುವಾಯನಕೆರೆ, ಬ್ಯಾಂಕ್ ಆಫ್ ಬರೋಡಾ ಬೆಳ್ತಂಗಡಿ, ವೈಭವ್ ಹಾರ್ಡ್‌ವೇರ್ ಗುರುವಾಯನಕೆರೆ, ಸುದ್ದಿ ಉದಯ ವಾರ ಪತ್ರಿಕೆ, ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಮೀಡಿಯಾ ಕ್ಲಬ್ ಬೆಳ್ತಂಗಡಿ, ವಾಣಿ ಶಿಕ್ಷಣ ಸಂಸ್ಥೆ, ಸೈಂಟ್ ಮೇರಿಸ್ ಶಾಲೆ ಲಾಯಿಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆ, ಪ್ರಸನ್ನ ಆಯುರ್ವೇದಿಕ್ ಕಾಲೇಜು ಲಾಯಿಲ, ರೂಪಾ ಕೇಟರರ‍್ಸ್ ಯರ್ಡೂರು ಗುರುವಾಯನಕೆರೆ, ರಿವಾ ವಾಟರ್ ಹಾಗೂ ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ವಿದ್ಯಾರ್ಥಿಗಳು, ಪೊಲೀಸರು ಮತ್ತು ಬೆಳ್ತಂಗಡಿ ತಾಲೂಕಿನ ನಾಗರಿಕರಿಂದ ‘ಮಾದಕ ವಸ್ತು ತಡೆ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ’ ಸಮಾರೋಪ ಸಮಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಡ್ರಗ್ಸ್ ದಂದೆ ಹಿಂದೆ ಮಂಗಳೂರು ನಗರದಲ್ಲಿ ಮಾತ್ರ ಇತ್ತು ಇಂದು ತಾಲೂಕು ಮಟ್ಟ, ಗ್ರಾಮ ಮಟ್ಟದವರೆಗೆ ಆವರಿಸಿದೆ. ಯುವ ಜನತೆ ಇದಕ್ಕೆ ಬಲಿಬಿದ್ದು, ತಮ್ಮ ತಂದೆ, ತಾಯಿಗಳ ಕನಸನ್ನು ನುಚ್ಚುನೂರು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಯಾವತ್ತೂ ದುಶ್ಚಟಗಳಿಗೆ ಬಲಿಯಾಗಬಾರದು, ಯುವಕರಲ್ಲಿ ಹುಮ್ಮನಸು, ಶಕ್ತಿ, ಉತ್ಸಾಹ ಇರುತ್ತದೆ. ಇದನ್ನು ಸದ್ವಿಚಾರಗಳಿಗೆ ಬಳಸಿಕೊಳ್ಳಿ ಕ್ರೀಡೆ, ಪುಸ್ತಕ ಓದುವ, ನಾಟಕ, ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ, ಶುದ್ಧ ಮನಸ್ಸು, ಉತ್ತಮ ಆರೋಗ್ಯದಿಂದ ಜೀವನದಲ್ಲಿ ಸುಖ-ಸಂತೋಷ, ನೆಮ್ಮದಿ ದೊರೆಯಲು ಸಾಧ್ಯವಿದೆ ಎಂದರು. ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದಾಗ ಕಾನೂನು ರೀತಿಯಲ್ಲಿ ಕೇಸು ಹಾಕಬೇಕಾಗುತ್ತದೆ. ಇದು ಅವರ ಮುಂದಿನ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ವಿದೇಶ ಪ್ರಯಾಣಕ್ಕೆ ಪಾಸ್‌ಪೋರ್ಟ್ ಸಿಗುವುದಿಲ್ಲ, ಕಂಪೆನಿಗಳಲ್ಲಿ ಉದ್ಯೋಗಕ್ಕೂ ಅಡ್ಡಿಯಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಇಂತಹ ವ್ಯಸನಕ್ಕೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ಯಾರ ಮನಸ್ಸು ಅವರ ನಿಯಂತ್ರಣದಲ್ಲಿ ಇರುವುದಿಲ್ಲವೋ ಅವರು ಜಾಸ್ತಿಯಾಗಿ ವ್ಯಸನಗಳಿಗೆ ಬಲಿಯಾಗುತ್ತಾರೆ. ಎಲ್ಲ ದುಶ್ಚಟಗಳಿಗೂ ಬೀಡಿ, ಸಿಗರೇಟ್ ಪ್ರಾರಂಭಿಕ ಹಂತವಾಗಿದೆ. ಕೆಟ್ಟ ಮನಸ್ಸು ವ್ಯಸನಗಳನ್ನು ಆಕರ್ಷಿಸಿದರೆ, ಕೆಟ್ಟ ವಿಷಯ ಶೀಘ್ರ ಪ್ರಭಾವ ಬೀಳುತ್ತದೆ. ದುಶ್ಚಟಗಳಿಗೆ ಬಲಿ ಬೀಳದಂತೆ ಜಾಗೃತೆ ವಹಿಸಬೇಕು, ಬಲಿಯಾದವ ಅದರಿಂದ ಹೊರಬರುವ ಪ್ರಯತ್ನ ಮಾಡಬೇಕು, ಮನುಷ್ಯ ಸಹಜ ಒತ್ತಡಗಳಿಗೆ ಭಜನೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಯುವ ಜನತೆ ಸನ್ಮಾರ್ಗದಲ್ಲಿ ನಡೆದಾಗ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ದೇವದಾಸ್ ಶೆಟ್ಟಿ ಅವರು ವಹಿಸಿ ಸಭೆಯನ್ನು ಮುನ್ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯತೀಶ್ ಎನ್. ಅವರು ವಿದ್ಯಾರ್ಥಿಗಳಿಗೆ ದುಶ್ಚಟ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಶಾಲೆಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಲಯನ್ಸ್ ಕ್ಲಬ್ ವತಿಯಿಂದ ಎಸ್.ಪಿ ಹಾಗೂ ಡಿವೈಎಸ್‌ಪಿಯವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಬಂಟ್ವಾಳ ವಿಭಾಗದ ಡಿವೈಎಸ್‌ಪಿ ವಿಜಯಪ್ರಸಾದ್, ಲಯನ್ಸ್ ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ಬೆಳ್ತಂಗಡಿ ವೃತ ನಿರೀಕ್ಷಕರಾದ ಸುಬ್ಬಪುರ್ ಮಠ್ ಮತ್ತು ನಾಗೇಶ್ ಕದ್ರಿ ಉಪಸ್ಥಿತರಿದ್ದರು. ಧರ್ಮಸ್ಥಳ ಠಾಣೆಯ ಎಸ್.ಐ ಸುಮರ್ಥ್, ಬೆಳ್ತಂಗಡಿ ನಗರ ಪೊಲೀಸ್ ಠಾಣೆಯ ಎಸ್.ಐ ಅರ್ಜುನ್, ಬೆಳ್ತಂಗಡಿ ಠಾಣಾ ಎಸ್.ಐ ಮರಳೀಧರ ನಾಯಕ್ ಮತ್ತು ಯಲ್ಲಪ್ಪ, ವೇಣೂರು ಮತ್ತು ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಅಧಿಕಾರಿಗಳು, ಲಯನ್ಸ್ ಕ್ಲಬ್‌ನ ಚಿದಾನಂದ ಇಡ್ಯ, ವಸಂತ ಶೆಟ್ಟಿ ಶ್ರದ್ಧಾ, ಲಕ್ಷ್ಮಣ ಪೂಜಾರಿ, ಪ್ರವೀಣ್ ಕುಮಾರ್ ಹೆಚ್.ಎಸ್, ಸುಂದರ ಶೆಟ್ಟಿ ಸುಲ್ಕೇರಿ, ಜಯರಾಮ ಭಂಡಾರಿ ಧರ್ಮಸ್ಥಳ, ಅಶೋಕ್ ಕುಮಾರ್ ಬಿ.ಪಿ, ಸುಧೀರ್ ಎಸ್.ಪಿ, ಶಂಕರ್ ರಾವ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿರೂಪಕ ಕಿರಣ್ ದೊಂಡೋಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು.

ಕಾಲ್ನಡಿಗೆ ಜಾಥಾಕ್ಕೆ ಚಾಲನೆ:

ಬೆಳಗ್ಗೆ ಬೆಳ್ತಂಗಡಿ ಡಿ.ಸಿ.ಸಿ ಬ್ಯಾಂಕ್ ಬಳಿಯಿಂದ ಆರಂಭಗೊಂಡ ‘ಮಾದಕ ವಸ್ತು ತಡೆ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾ’ಕ್ಕೆ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಹಾಗೂ ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿಸಾನಿಕಂ, ಪ್ರಿಯಾಆಗ್ನೇಸ್, ಅವರು ಚಾಲನೆ ನೀಡಿದರು. ಬೆಳ್ತಂಗಡಿ ಡಿ.ಸಿ.ಸಿ.ಬ್ಯಾಂಕ್ ಬಳಿಯಿಂದ ಬೆಳ್ತಂಗಡಿ ಮುಖ್ಯ ಪೇಟೆಯ ಮೂಲಕ ಬೆಳ್ತಂಗಡಿ ಶ್ರೀ ಧ.ಮಂ. ಸಭಾ ಭವನದವರೆಗೆ ಜಾಥಾ ನಡೆದು, ದುಶ್ವಟಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಯಿತು.