ಸಾಧನೆ ಮಾಡಲು ಹೊರಟವರಿಗೆ ಹಲವಾರು ತೊಂದರೆಗಳು ಎದುರಾಗುತ್ತವೆ. ಅವುಗಳನ್ನೆಲ್ಲಾ ಮೆಟ್ಟಿ ನಿಂತಾಗ ಮಾತ್ರವೇ ಯಶಸ್ಸಿನ ಶಿಖರವನ್ನು ಮುಟ್ಟಲು ಸಾಧ್ಯ ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಸಾಧನೆ ಮಾಡಲು ಹೊರಟವರಿಗೆ ಹಲವಾರು ತೊಂದರೆಗಳು ಎದುರಾಗುತ್ತವೆ. ಅವುಗಳನ್ನೆಲ್ಲಾ ಮೆಟ್ಟಿ ನಿಂತಾಗ ಮಾತ್ರವೇ ಯಶಸ್ಸಿನ ಶಿಖರವನ್ನು ಮುಟ್ಟಲು ಸಾಧ್ಯ ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಸಿದ್ಧರಬೆಟ್ಟದ ಮಠದಲ್ಲಿ ೨೩೦ನೇ ಬೆಳದಿಂಗಳ ಕೂಟದ ಅಂಗವಾಗಿ ನಡೆದ ಧರ್ಮ ಹಾಗೂ ಜನಜಾಗೃತಿ ಸಮಾರಂಭದಲ್ಲಿ ಅಂಧ ಮಹಿಳೆಯರ ಟಿ-೨೦ ವಿಶ್ವಕಪ್ ವಿಜೇತ ತಂಡದ ಎನ್.ಆರ್.ಕಾವ್ಯ,ಅವರನ್ನು ಸನ್ಮಾನಿಸಿ ಮಾತನಾಡಿದರು.
ಬಡತನದ ಕುಟುಂಬದಲ್ಲಿ ಜನಿಸಿ, ಅಂಗವೈಫಲ್ಯ ಹೊಂದಿದ್ದರೂ ಕೂಡ ಸಾಧನೆ ಮಾಡಲೇಬೇಕೆಂಬ ಧೃಡ ಸಂಕಲ್ಪದಿಂದಾಗಿ ಇಂದು ಅಭೂತಪೂರ್ವ ಸಾಧನೆಯನ್ನು ಮಾಡಿರುವ ಸಾಧಕಿಗೆ ಶ್ರೀ ಮಠ ಹಾಗೂ ಮಠದ ಸದ್ಭಕ್ತರು ಅವಶ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು. ಹುಕ್ಕೇರಿಯ ಗುರುಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರವಚನವ ನೀಡಿ, ಧರ್ಮವು ಬದುಕಿಗೆ ಆಸರೆಯಾಗಿದೆ. ಧರ್ಮವೆಂಬುದು ಬಾಯಿಂದ ಹೇಳುವುದಲ್ಲ. ಬದುಕಿನಲ್ಲಿ ನಡೆದು ತೋರಿಸುವುದು. ಧರ್ಮದಿಂದ ನಡೆಯುವ ವ್ಯಕ್ತಿಯನ್ನು ಯಾರಿಂದಲೂ ಮಣಿಸಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿದ ಎನ್.ಆರ್.ಕಾವ್ಯ ಮಾತನಾಡಿ, ಬಾಲ್ಯದಿಂದ ಅನುಭವಿಸಿದ ಬಡತನ, ಅಂಗ ವೈಫಲ್ಯದ ಬಗ್ಗೆ ನೆರೆಯವರಾಡಿದ ಚುಚ್ಚು ಮಾತುಗಳು ಇದರೊಂದಿಗೆ ಹಿರಿಯರ ಹಾಗೂ ಹಿತೈಷಿಗಳ ಪ್ರೇರಣೆಯ ಮಾತುಗಳು. ಸಮರ್ಥಂ ಸಂಸ್ಥೆಯ ಸಹಕಾರ ಇಂದಿನ ಸಾಧನೆಗೆ ಕಾರಣವಾಯಿತೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ, ರಾಮಮೂರ್ತಿ, ಜೋನಿಗರಹಳ್ಳಿ ಸವಿತಾ, ಮಮತ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.