ಕನ್ನಡಪ್ರಭ ವಾರ್ತೆ ಸರಗೂರುಅಕ್ರಮ ಸಂಬಂಧಕ್ಕೆ ಅಡ್ಡಿಯಾಗಲಿದೆ ಎಂದು ಪ್ರೇಯಸಿಯ ಪತಿಯನ್ನು ಕೊಲೆಗೈದ ಆರೋಪಿಗಳನ್ನು 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ ಬಿನ್ ಲೇ. ರಾಜೇಗೌಡ (32), ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದ ಅಮೃತಾ ಕೋಂ. ಜವರಪ್ಪ (26) ಬಂಧಿತ ಆರೋಪಿಗಳು. ಘಟನೆ ವಿವರ: ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದ ಜವರಪ್ಪ ಎಂಬವರು ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳೊಂದಿಗೆ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ, ಪತ್ನಿಯ ನಡುವೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ನನ್ನ ಅತ್ತಿಗೆ ಅಮೃತ 12 ದಿನಗಳ ಹಿಂದೆ ಮಕ್ಕಳನ್ನು ಕರೆದುಕೊಂಡು ಹಬ್ಬಕ್ಕೆಂದು ಅವರ ತವರು ಮನೆಗೆ ಹೋಗಿದ್ದರು ಎಂದು ಮೃತನ ಸಹೋದರ ರವಿ ಪಟ್ಟಣದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಏ. 16 ರಂದು ನಮ್ಮ ಅಣ್ಣ ಜವರಪ್ಪ ಪತ್ನಿ ಮನೆಯಾದ ಹಾಡ್ಯ ಗ್ರಾಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು, ನಂತರ ಅದೇ ದಿನ ಸಂಜೆ ಸುಮಾರು 6.45ರ ಸಮಯದಲ್ಲಿ ನನಗೆ ಪೋನ್ ಮಾಡಿ ನಾನು ಹೆಡಿಯಾಲದಲ್ಲಿ ಇದ್ದೇನೆ ಊರಿಗೆ ಬರುತ್ತೇನೆಂದು ಪೋನ್ ನಲ್ಲಿ ತಿಳಿಸಿದ್ದು, 16ರಂದು ಮನೆಗೆ ಬಂದಿರುವುದಿಲ್ಲ. ಬದಲಿಗೆ (ಏ. 17) ಮಾರನೇಯ ದಿನ ಬೆಳಗ್ಗೆ 6.30 ಕ್ಕೆ ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಮಲಗಿದ್ದ ಜವರಪ್ಪನನ್ನು ನೋಡಿ ಮಾತನಾಡಿಸಿದಾಗ ಮಾತನಾಡದೇ ಇದ್ದ ಕಾರಣ ಗ್ರಾಮಕ್ಕೆ ಬಂದು ವಿಚಾರ ತಿಳಿಸಿದ್ದು, ನಂತರ ನಮ್ಮ ಗ್ರಾಮಸ್ಥರೊಡನೆ ನೋಡಲಾಗಿ ನಮ್ಮ ಅಣ್ಣನ ಬಾಯಿ ಮತ್ತು ಮೈಕೈಗಳಿಗೆ ಏಟಾಗಿ ಮಗಲಾತಿ ಮಲಗಿದ್ದು, ನಮ್ಮ ಅಣ್ಣ ಜವರಪ್ಪನನ್ನು ಯಾರೋ ಕೊಲೆ ಮಾಡಿ ಹಾಕಿದ್ದು, ಸೂಕ್ತ ಕ್ರಮವಹಿಸುವಂತೆ ಕೋರಿದ್ದರು. ಆರೋಪಿ ಸಿದ್ದೇಶ್, ಮೃತನ ಪತ್ನಿ ಅಮೃತಾ ಇಬ್ಬರ ನಡುವೆ ಅಕ್ರಮ ಸಂಬಂಧ ಇದ್ದು, ತನ್ನ ಪತಿ ಇದ್ದರೆ ಅಕ್ರಮ ಸಂಬಂಧಕ್ಕೆ ತೊಂದರೆಯಾಗಲಿದೆ ಎಂದು ಪತ್ನಿ ಕುಮ್ಮಕ್ಕಿನಿಂದ ಆರೋಪಿ ಸಿದ್ದೇಶ್ ಜವರಪ್ಪ ಎಂಬವರನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಸೆರೆಗೆ ಮೈಸೂರಿನ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ ಅವರ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಿದ್ದು, ಸರಗೂರು ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಪಿಎಸ್ಐಗಳಾದ ಆರ್. ಕಿರಣ್, ಚಂದ್ರಹಾಸನಾಯಕ, ಆರ್. ಕುಮಾರ್ ಹಾಗೂ ಠಾಣೆಯ ಎಎಸ್ಐಗಳಾದ ಶ್ರೀಕಂಠಸ್ವಾಮಿ, ಕೃಷ್ಣಕುಮಾರ್, ಸಿಬ್ಬಂದಿಗಳಾದ ಇಮ್ರಾನ್ ಅಹಮದ್, ಎಂ.ಎಸ್. ಶಿವರಾಜು, ಎಂ. ಶೋಭಾ ಹಾಗೂ ಚಾಲಕರಾದ ಆನಂದ ಮತ್ತು ಶಿವಪ್ಪ, ರಾಮಕೃಷ್ಣ ಅವರನ್ನು ನೇಮಿಸಿದ್ದರು.ಜಿಲ್ಲಾ ಪೊಲೀಸ್ ಕೃಷ್ಣಯ್ಯ, ವಿನಯಕುಮಾರ್, ಸುನೀಲ್ ಕುಮಾರ್, ರಮೇಶ, ಪರಶಿವಮೂರ್ತಿ, ಸೋಮನಾಯಕ, ಮಲಿಯಪ್ಪ, ಕಚೇರಿಯ ಟೆಕ್ನಿಕಲ್ ಸೆಲ್ಅವರ ಸಹಾಯದಿಂದ ಆರೋಪಿತರನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರಿಗೆ ವಿಶೇಷ ಬಹುಮಾನ ಘೋಷಿಸಲಾಗಿದೆ.----------------