ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ್ ಹದ್ಲಿ ಅವರು ಆರ್‌ಎಸ್ಎಸ್ ಪ್ರಮುಖರೊಂದಿಗೆ ಭೇಟಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಜೂನ್ 21 ರಂದು ಆರ್‌ಎಸ್ಎಸ್‌ ಸಂಬಂಧಿಸಿದಂತ ನಾಯಕರೊಂದಿಗೆ ಭೇಟಿ ಆಗಿರುವುದು ತಿಳಿದು ಬಂದಿದ್ದು, ಪೋಟೋಗಳು ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ ಎಂದರು.

ಆರ್‌ಎಸ್‌ಎಸ್ ಮುಖಂಡರೊಂದಿಗೆ ಭೇಟಿಯಾದ ನಾಗರಾಜ್ ಹದ್ಲಿ ಅವರ ವಿರುದ್ಧ ಮುಸ್ಲಿಂ ಮುಖಂಡರ ಹಾಗೂ ಯುವಕರ ವೇದಿಕೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ವಿಷಯವನ್ನು ಹೈಕಮಾಂಡ್‌ ಗೆ ತಿಳಿಸಲಾಗುವುದು ಎಂದರು.

ಬಿಜೆಪಿ ಅಂಗ ಸಂಸ್ಥೆ ಆರ್‌ಎಸ್ಎಸ್, ಬಿಜೆಪಿ-ಆರ್‌ ಎಸ್ಎಸ್ ಸಿದ್ಧಾಂತ ಒಂದೇ ಆದರೆ, ಕಾಂಗ್ರೆಸ್ ಸಿದ್ಧಾಂತ ಬೇರೆ ಇದೆ. ಕಾಂಗ್ರೆಸ್ ಪಕ್ಷದವರು ಯಾವತ್ತೂ ಆರ್‌ ಎಸ್‌ಎಸ್ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ನಮ್ಮ ಎಐಸಿಸಿ ನಿರ್ಣಯ ಮಾಡಿದೆ. ಅದರಂತೆ ನಡೆದುಕೊಳ್ಳಬೇಕಾಗಿತ್ತು. ನಮ್ಮ ಪಕ್ಷದವರು ಯಾರೇ ಆಗಲಿ ಹೋಗಬಾರದು ಅದು ತಪ್ಪು. ತಮ್ಮ ವೈಯಕ್ತಿಕ ಭೇಟಿ ಬೇರೆ ಆಗುತ್ತೆ ಅದನ್ನು ನಾವು ಕೇಳಲ್ಲ. ಆದರೆ, ಪಕ್ಷದ ಜವಾಬ್ದಾರಿ ಹುದ್ದೆಯಲ್ಲಿದ್ದುಕೊಂಡು ಈ ರೀತಿ ಭೇಟಿಯಾಗುವುದು ಸರಿಯಲ್ಲ ಎಂದು ಖಾರವಾಗಿ ಹೇಳಿದರು.


ಅಯೂಬಖಾನ ಬಾಗೇವಾಡಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಅವರೇ ದೂರನ್ನು ನೀಡಿದ್ದಾರೆ ಎಂದು ನಂಜಯ್ಯನಮಠ ಸ್ಪಷ್ಟನೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಚಂದ್ರಶೇಖರ ರಾಠೋಡ, ನಿಂಗಪ್ಪ ಗಸ್ತಿ, ಶ್ರೀನಿವಾಸ ಬಳ್ಳಾರಿ, ಅಬ್ದುಲ್ ಮುಲ್ಲಾ ಇದ್ದರು.

ಈಚೆಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರ ವಿರುದ್ಧ ಪಕ್ಷದವರೇ ಹುನ್ನಾರ ನಡೆಸಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ ತಪಶೆಟ್ಟಿ, ನಾನು ಸಮರ್ಥವಾಗಿ ನಿಭಾಯಿಸುತ್ತೇನೆ. ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇದಕ್ಕೆ ಯಾವುದೇ ಸೊಪ್ಪು ಹಾಕುವುದಿಲ್ಲ ಎಂದರು.