ಶಾಸಕ, ಮಾಜಿ ಸಚಿವ ಚವ್ಹಾಣ್‌ ಗ್ರಾಮ ಸಂಚಾರ

| Published : Jan 21 2025, 12:32 AM IST

ಸಾರಾಂಶ

ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಔರಾದ್‌ (ಬಿ) ಶಾಸಕ ಪ್ರಭು ಚವ್ಹಾಣ್‌ , ಸುಮಾರು 2 ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಕಮಲನಗರ

ಔರಾದ್‌ (ಬಿ) ಶಾಸಕ ಪ್ರಭು ಚವ್ಹಾಣ್‌ ಅವರು ಗ್ರಾಮ ಸಂಚಾರ ಮುಂದುವರೆಸಿದ್ದು, ಜ. 20ರಂದು ಖೇರ್ಡಾ, ಭಂಡಾರಕುಮಟಾ, ಧೋಪರವಾಡಿ, ಹಂದಿಕೇರಾ, ಚಿಮ್ಮೇಗಾಂವ್‌, ಮಾಳೆಗಾಂವ್‌, ಭೊಪಾಳಘಡ, ಬೆಳಕುಣಿ (ಬಿ), ಭವಾಜಿ ಬಿಜಲಗಾಂವ್‌, ಸಂಗನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸುಮಾರು 2ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಅಹವಾಲು ಸ್ವೀಕಾರದ ವೇಳೆ ಗ್ರಾಮಸ್ಥರು ಒಬ್ಬೊಬ್ಬರಾಗಿ ತಮ್ಮ ಗ್ರಾಮದಲ್ಲಿನ ಮತ್ತು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಬಳಿಕ ಗ್ರಾಮದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಎಲ್ಲರ ಸಮಸ್ಯೆಗಳನ್ನು ಶಾಂತತೆಯಿಂದ ಆಲಿಸಿದ ಶಾಸಕರು, ಪಡಿತರ, ಪಿಂಚಣಿ ಸಮಸ್ಯೆ, ಬಸ್‌ ಸಮಸ್ಯೆ, ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಪಂದಿಸಿದರು. ಕಾಲಮಿತಿಯಲ್ಲಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಿದರೆ ಪ್ರಮುಖ ಸಮಸ್ಯೆಗಳೇ ನಿವಾರಣೆಯಾಗುತ್ತವೆ, ಹಾಗಾಗಿ ಎಲ್ಲ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಯತ್ತ ಒಲವು ತೋರಿಸಬೇಕು ಎಂದು ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್‌ ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್‌ ಮಲಶೆಟ್ಟಿ ಚಿದ್ರೆ, ಅಮಿತಕುಮಾರ ಕುಲಕರ್ಣಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ವಸಂತ ಬಿರಾದಾರ, ಶಿವರಾಜ ಅಲ್ಮಾಜೆ, ಯಶೋಧಾಬಾಯಿ ಚವ್ಹಾಣ್‌, ರಾಜಕುಮಾರ ಪೋಕಲವಾರ, ಯಾದವರಾವ್‌ ಸಗರ, ಮಂಜು ಸ್ವಾಮಿ, ಮೃತ್ಯುಂಜಯ ಬಿರಾದಾರ, ಅನೀಲ ಬಿರಾದಾರ, ಕೊಂಡಿಬಾ ಬಿರಾದಾರ, ಸಚಿನ ಬಿರಾದಾರ, ಸಂಜು ಪಾಟೀಲ್‌, ಅಶೋಕ ದೇಶಮುಖ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ, ಜೆಸ್ಕಾಂ ರವಿ ಕಾರಬಾರಿ, ಆರೋಗ್ಯಾಧಿಕಾರಿ ಡಾ.ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಚವ್ಹಾಣ್‌ ಆರೋಗ್ಯದಲ್ಲಿ ಏರು ಪೇರು, ಸದ್ಯ ಸ್ಥಿರ

ನಿರಂತರ ಪ್ರವಾಸದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿ ಶಾಸಕ ಪ್ರಭು ಚವ್ಹಾಣ್‌ ಅವರು ದಿಢೀರನೆ ಅಸ್ವಸ್ಥರಾದ ಘಟನೆ ನಡೆದಿದೆ.ಸೋಮವಾರ ಗ್ರಾಮ ಸಂಚಾರ ಕಾರ್ಯಕ್ರಮದ ನಿಮಿತ್ತ ಕಮಲನಗರ ತಾಲೂಕಿನ ಖೇರ್ಡಾ, ಭಂಡಾರಕುಮಠಾ, ಧೋಪರವಾಡಿ, ಹಂದಿಖೇರಾ ಹಾಗೂ ಚಿಮ್ಮೆಗಾಂವ್‌ ಗ್ರಾಮದಲ್ಲಿ ಸಂಚಾರ ಮಾಡಿದ್ದಾರೆ. ಚಿಮ್ಮೆಗಾಂವ್ ಗ್ರಾಮದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ತಲೆ ಸುತ್ತು ಬಂದು ಅಸ್ಚಸ್ಥರಾಗಿದ್ದಾರೆ. ಜೊತೆಯಲ್ಲಿಯೇ ಇದ್ದ ತಾಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ಹಾಗೂ ಡಾ. ಪವನ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.ನಂತರ ಸಮೀಪದ ಉದಗೀರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಡಾ. ಅನುಪ ಚಿಕಮುರ್ಗೆ ಅವರು ಆರೋಗ್ಯ ತಪಾಸಣೆ ಮಾಡಿದ್ದು ಶಾಸಕಕ ಆರೋಗ್ಯ ಸ್ಥೀರವಾಗಿದೆ. ಅತಿಯಾದ ಪ್ರವಾಸ, ಮಾನಸಿಕ ಒತ್ತಡದಿಂದಾಗಿ ಹೀಗಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

ಗ್ರಾಮ ಸಂಚಾರ ನಿರಂತರ:

ಶಾಸಕರು ಅಸ್ವಸ್ಥರಾದ ಹಿನ್ನಲೆಯಲ್ಲಿ ತಹಸೀಲ್ದಾರ್‌ ಅಮಿತ ಕುಲಕರ್ಣಿ ಹಾಗೂ ತಾಪಂ ಇಒ ಮಾಣಿಕರಾವ್‌ ಪಾಟೀಲ ಅವರ ನೇತೃತ್ವದಲ್ಲಿ ಗ್ರಾಮ ಸಂಚಾರ ಕಾರ್ಯಕ್ರಮ ಮುಂದುವರೆದಿದ್ದು ತಾಲೂಕಿನ ಮಾಳೆಗಾಂವ್‌, ಭೋಪಾಳಗಡ, ಬೇಳಕೊಣಿ, ಬಿಜಲಗಾಂವ್‌ ಹಾಗೂ ಸಂಗನಾಳ ಗ್ರಾಮದಲ್ಲಿ ಸಮಸ್ಯೆಗಳನ್ನು ಆಲಿಸಲಾಯಿತು.