ಕನ್ನಡಪ್ರಭ ವಾರ್ತೆ ಮೈಸೂರುಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸಲು ಪ್ರಾಮಾಣಿಕ ಪ್ರಯತ್ನಪಡುತ್ತಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ಮೈಸೂರು ತಾಲೂಕಿನ ದೊಡ್ಡಹಟ್ಟಿಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಸಿದ್ದಪ್ಪಾಜಿ ದೇವಸ್ಥಾನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ,.ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಯೋಜನೆಗೆ ಮಂಜೂರಾತಿ ಕೋರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅನೇಕ ಬಾರಿ ಚರ್ಚೆ ಮಾಡಿದ್ದೇನೆ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.ಕೆರೆಗಳು ತುಂಬಿದರೆ ಅಂತರ್ಜಲ ಹೆಚ್ಚಳವಾಗುವ ಜತೆಗೆ, ರೈತರ ಜಮೀನುಗಳಿಗೂ ನೀರಾವರಿ ಸೌಲಭ್ಯ ದೊರೆಯಲಿದೆ. ಈಗಾಗಲೇ ಸಿಎಂ ಅವರು ಒಪ್ಪಿರುವುದರಿಂದ ಶೀಘ್ರದಲ್ಲೇ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದರು.ಚಾಮುಂಡೇಶ್ವರಿ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸಲು ಹಳೆ ಉಂಡುವಾಡಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 32 ಟ್ಯಾಂಕ್ ಗಳು ನಿರ್ಮಾಣವಾಗಿದ್ದು, ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಯೋಜನೆ ಪೂರ್ಣವಾದ ಮೇಲೆ ನೀರು ಹರಿಸುವ ಕೆಲಸ ಮಾಡಲಾಗುವುದು ಎಂದರು.ಮಕ್ಕಳು ವಿದ್ಯಾವಂತರಾಗಿ, ಬುದ್ಧಿವಂತರಾಗಿ ದೇಶದ ಆಸ್ತಿಗಳಾಗಬೇಕು. ಸುಖ, ಸಂತೋಷದಿಂದ ಇರುವ ಜತೆಗೆ ಆರೋಗ್ಯದಿಂದ ಇರಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವ ಜತೆಗೆ ಮಾನವೀಯ ಮೌಲ್ಯ ಹೊಂದಿರುವ ಪ್ರಜೆಗಳನ್ನಾಗಿ ಮಾಡಬೇಕು. ಮಕ್ಕಳೇ ಮುಂದಿನ ನಾಯಕರು ಎಂಬುದನ್ನು ಅರಿಯಬೇಕು. ಗ್ರಾಮಗಳಲ್ಲಿ ಒಬ್ಬರಿಗೊಬ್ಬರು ದ್ವೇಷ, ಅಸೂಯೆ ಮಾಡದೆ ನಾವೆಲ್ಲರೂ ಮನುಷ್ಯರು ಎನ್ನುವ ಮನೋಭಾವ ಹೊಂದಿ ಪರಸ್ಪರ ಚೆನ್ನಾಗಿರಬೇಕು. ಮತ್ತೊಬ್ಬರನ್ನು ಪ್ರೀತಿಸುವ, ಗೌರವಿಸುವ ಗುಣ ಹೊಂದಿರಬೇಕು ಎಂದು ಸಲಹೆ ನೀಡಿದರು.1983 ರಿಂದಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಓಡಾಡುತ್ತಿದ್ದರೂ ಗ್ರಾಮದಲ್ಲಿ ನಡೆಯುವ ಸಿದ್ದಪ್ಪಾಜಿ ಉತ್ಸವಕ್ಕೆ ಬಂದಿರಲಿಲ್ಲ. ದೇವರ ಕೃಪೆಯಿದ್ದರೆ ಕಾಲಕಾಲಕ್ಕೆ ಮಳೆ, ಮಳೆ ಬರಲಿದೆ. ಮಳೆ ಬಂದರೆ ಬೆಳೆ ಬರಲಿದೆ. ಬೆಳೆ ಬಂದರೆ ರೈತನ ಬದುಕು ಹಸನಾಗಿರುತ್ತದೆ ಎಂದರು.ಗೋಪಾಲಪುರದ ಬಸವೇಗೌಡ, ಮಾದಹಳ್ಳಿ ಮಾದಪ್ಪ, ನಾಗರಾಜು, ಸತೀಶ್, ನುಗ್ಗಹಳ್ಳಿ ಮಂಜು, ಶಂಕರ್, ಪುಟ್ಟಸ್ವಾಮಚಾರಿ, ಚಿಕ್ಕಬೀಚನಹಳ್ಳಿ ಶಿವಕುಮಾರ್, ಶಂಕರ್, ಕುಮಾರ್, ಪಾಪಣ್ಣ, ಚಿಕ್ಕಸ್ವಾಮಿ, ಲಕ್ಕೇಗೌಡ, ಪುಟ್ಟೇಗೌಡ, ಬಸವೇಗೌಡ, ಚಂದ್ರ, ಸೋಮೇಶ್ವರ್, ಯೋಗೇಶ್, ಮಹದೇವು, ಉದಯ್, ಪುಟ್ಟಸ್ವಾಮಿ ಮೊದಲಾದವರು ಇದ್ದರು.