ಬಂಗಾರಪೇಟೆ: ತಾಲೂಕಿನ ನತ್ತಬೆಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಶನಿವಾರ ನಡೆದ ಗ್ರಾಮದ ಡೇರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಅಶ್ವಥ್ ಮಾತ್ರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಾಸಕರು ಈ ಹಿಂದೆ ಗ್ರಾಮದ ಡೇರಿಯನ್ನು ಎಲ್ಲರೂ ಕಡೆಗಣಿಸಿದ್ದರು. ಆದರೆ ನಾನು ಪ್ರವೇಶ ಕೊಟ್ಟನಂತರ ಸಂಘ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಹಾಲು ಸರಬರಾಜುದಾರರಿಗೆ ಸರ್ಕಾರದ ಎಲ್ಲಾ ಅನುಕೂಲಗಳನ್ನು ಒದಗಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು. ಎಲ್ಲರ ಸಹಕಾರದಿಂದ ಸಂಘವನ್ನು ಅಭಿವೃದ್ದಿಪಡಿಸುವೆ. ಅಲ್ಲದೆ ಗ್ರಾಮದ ಡೇರಿಗೆ ಬಿಎಂಸಿ ಕೇಂದ್ರವನ್ನು ಅಳವಡಿಸುವೆ ಎಂದು ಭರವಸೆ ನೀಡಿದರು. ಗ್ರಾಮದ ಹಾಲು ಪೂರೈಕೆದಾರರು ನನ್ನನ್ನು ಕೋಮುಲ್ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ. ಅವರ ನಂಬಿಕೆಗೆ ಯಾವುದೇ ಧಕ್ಕೆ ಬಾರದಂತೆ ನಡೆದುಕೊಳ್ಳುವೆ ಎಂದು ಭರವಸೆ ನೀಡಿದರು. ಕೋಮುಲ್‌ನಲ್ಲಿ ಹಲವು ವ್ಯವಸ್ಥೆಗಳನ್ನು ಸರಿಪಡಿಸುವ ಸಲುವಾಗಿ ಸಹಕಾರ ಕ್ಷೇತ್ರಕ್ಕೆ ಪಾರ್ದಾಪಣೆ ಮಾಡಿರುವೆ. ಗುರಿಯನ್ನು ಮುಟ್ಟುವೆ ಎಂದು ತಿಳಿಸಿದರು.

ಈ ವೇಳೆ ನರಸಿಂಹಮೂರ್ತಿ, ರಾಜಪ್ಪ, ಗುರುಮೂರ್ತಿ, ಶ್ರೀನಿವಾಸ್, ನಾರಾಯಣಪ್ಪ, ರಾಮಾಂಜನಪ್ಪ, ಪೂರ್ಣಿಮ, ವೆಂಕಟೇಶಪ್ಪ, ರಮೇಶ್, ಜುಂಜನಹಳ್ಳಿ ನಾರಾಯಣಸ್ವಾಮಿ, ಆಲೂಗಡ್ಡೆ ಶೇಖರ್, ಕಾರ್ಯದರ್ಶಿ ಗೋವಿಂದಪ್ಪ ಇತರರು ಇದ್ದರು.