ಮೂಡುಬಿದಿರೆ: ಶಿಕ್ಷಕರು ಮತ್ತು ಪೋಷಕರು ಮಕ್ಕಳ ಗುರಿ ನಿರ್ಧಾರದಲ್ಲಿ ಸ್ಪಷ್ಟತೆ ನೀಡಿದರೆ, ಮಕ್ಕಳ ಸಾಧನೆ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಬಲ್ಲದು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ನುಡಿದರು.ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆದ ವ್ಯವಹಾರ ಆಡಳಿತ ವಿಭಾಗದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ 2025-26ನ್ನು ಉದ್ಘಾಟಿಸಿ ಮಾತನಾಡಿದರು.

ಈಗಿನ ವಿದ್ಯಾರ್ಥಿಗಳು ಉದ್ಯೋಗದ ಸಮಸ್ಯೆ, ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ ಹಲವು ಗೊಂದಲಗಳ ನಡುವೆ ಇದ್ದಾರೆ. 18ರಿಂದ 21 ವರ್ಷದ ವಿದ್ಯಾರ್ಥಿಗಳು ಸಮಸ್ಯೆ, ಗೊಂದಲಗಳನ್ನು ದಾಟಿ ತಮ್ಮ ಗುರಿಯ ಕಡೆಗೆ ಗಮನ ನೀಡುತ್ತಾರೆಂದರೆ ಅವರನ್ನು ನಾವು ಅಭಿನಂದಿಸಬೇಕು.

ವ್ಯವಹಾರ ಆಡಳಿತ ವಿಭಾಗದ 75 ವಿದ್ಯಾರ್ಥಿಗಳು ಇನ್ಫೋಸಿಸ್‌ನ ಅಪ್ರೆಂಟಿಸ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇನ್ಫೋಸಿಸ್‌ನ ಅಪ್ರೆಂಟಿಸ್‌ಶಿಪ್ ಆಯ್ಕೆಯಾದ ಆಳ್ವಾಸ್ ದೇಶದ ಏಕೈಕ ಸಂಸ್ಥೆ ಆಳ್ವಾಸ್ ಶಿಕ್ಷಣ ಸಂಸ್ಥೆ ಎಂದು ಮಾಹಿತಿ ನೀಡಿದರು.ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀತಾಲಕ್ಷ್ಮೀ ಮಾತನಾಡಿ, ಶಿಕ್ಷಕ-ರಕ್ಷಕ ಸಭೆಯು ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶ ಎಂದರು.

ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಸುರೇಖಾ ಮಾತನಾಡಿ, ಪೋಷಕರು ಮಕ್ಕಳಿಗೆ ಕಿವಿಯಾಗಬೇಕು. ನಿಮ್ಮ ಮಕ್ಕಳು ಯಾರ ಜೊತೆ ಸ್ನೇಹ ಬೆಳೆಸುತ್ತಾರೆ ಯಾರ ಜೊತೆ ಒಡನಾಟ ನಡೆಸುತ್ತಾರೆ ಎನ್ನುವುದನ್ನು ತಿಳಿದು ಕೊಳ್ಳುವುದು ಮುಖ್ಯ ಎಂದು ಹೇಳಿದರು.

ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಪ್ರಕಾಶಿನಿ ಪೂಜಾರಿ, ಪ್ರಾಧ್ಯಾಪಕಿ ಪ್ರಜ್ಞಾ ಎಸ್.ಬಿ. ಉಪಸ್ಥಿತರಿದ್ದರು.


ವಚನ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಜಾನ್ವಿ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿನಿ ಶೀತಲ್ ವಂದಿಸಿದರು.