ಕನ್ನಡಪ್ರಭ ವಾರ್ತೆ ಸಿಂದಗಿ
ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿಯಾಗುವುದಕ್ಕೆ ಸಾಧ್ಯ. ಆ ನಿಟ್ಟಿನಲ್ಲಿ ಮತಕ್ಷೇತ್ರದ ಹಳ್ಳಿಗಳ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಬಂಕಲಗಿ ಸಮೀಪದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಮತಕ್ಷೇತ್ರದ ಸಿಂದಗಿಯಿಂದ ಬಂಕಲಗಿ ಗ್ರಾಮದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಮಂಜೂರಾದ ₹1 ಕೋಟಿ ಮೊತ್ತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಂಕಲಗಿ ಗ್ರಾಮದಿಂದ ನಿತ್ಯ ನೂರಾರು ರೈತರು ಮತ್ತು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮತ್ತು ಇನ್ನಿತರ ಕಾರ್ಯಗಳಿಗೆ ಸಿಂದಗಿಗೆ ಆಗಮಿಸುತ್ತಾರೆ. ಆದರೆ, ಈ ರಸ್ತೆ ಹದಗೆಟ್ಟಿತ್ತು. ಈ ಭಾಗದ ಅನೇಕ ವಿದ್ಯಾರ್ಥಿಗಳ ರೈತರ ಮತ್ತು ಸಾರ್ವಜನಿಕರ ಬೇಡಿಕೆಯೂ ಕೂಡ ಇದು ಆಗಿತ್ತು. ಈ ಕಾರಣಕ್ಕೆ ಗ್ರಾಮಸ್ಥರ ಮನವಿಯ ಮೇರೆಗೆ ಸುಮಾರು ₹1 ಕೋಟಿ ಅನುದಾನದಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಯಾವುದೇ ತಾರತಮ್ಯವಿಲ್ಲದೇ ಎಲ್ಲ ಗ್ರಾಮಗಳ ಅಭಿವೃದ್ಧಿ ಮಾಡುತ್ತೇನೆ. ಕ್ಷೇತ್ರವನ್ನು ತಲೆ ಎತ್ತಿ ನೋಡುವಂತೆ ಮಾಡುತ್ತೇನೆ. ನನ್ನ ಕನಸಿಗೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಸಹಕಾರ ಮುಖ್ಯವಾಗಿ ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಕೆಡಿಪಿ ಸದಸ್ಯ ಖಾದೀರ ಬಂಕಲಗಿ, ಗ್ಯಾರಂಟಿ ಸದಸ್ಯರಾದ ಸುನಂದಾ ಯಂಪುರ್, ರಜತ್ ತಾಂಬೆ, ಮೊಸೀನ್ ಬಿಳಗಿ, ಪರಸು ಉಪ್ಪಾರ್, ಶಂಕರಗೌಡ ಪಾಟೀಲ, ಮಾಳಪ್ಪ ಪೂಜಾರಿ ಪದ್ಮಮಗೌಡ ಬಿರಾದಾರ್, ಮಹಿಳಾ ಅಧ್ಯಕ್ಷೆ ಜಯಶ್ರೀ ಹದನೂರ, ವರ್ಷಾ ಪಾಟೀಲ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
