ತಾಯಿ ತಾನೇ ಹೆತ್ತ ಮಗನನ್ನು ಮನಸೋಇಚ್ಛೆ ಥಳಿಸಿ, ಕಂಡ ಕಂಡಲ್ಲಿ ಬರೆ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾಳೆ. ಈ ಮೃಗೀಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಧಾರವಾಡ: ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿದೆ. ಆದರೆ, ಇಲ್ಲೊಬ್ಬಳು ತಾಯಿ ಈ ಮಾತಿಗೆ ತದ್ವಿರುದ್ಧವಾಗಿ ತಾನೇ ಹೆತ್ತ ಮಗನನ್ನು ಮನಸೋಇಚ್ಛೆ ಥಳಿಸಿ, ಕಂಡ ಕಂಡಲ್ಲಿ ಬರೆ ಹಾಕಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾಳೆ. ಈ ಮೃಗೀಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಲ್ಲಿಯ ಎನ್ಟಿಟಿಎಫ್ ಬಳಿ ನಿವಾಸಿ ಲಕ್ಷ್ಮಿ ಜಿನ್ನೂರ ಎಂಬಾಕೆ, ತಂದೆ ಇಲ್ಲದ 10 ವರ್ಷದ ತನ್ನ ಮಗನ ಮೇಲೆ ಹಲ್ಲೆ ನಡೆಸಿದ್ದು, ಮಗು ವಿಪರೀತ ಹಠ ಮಾಡುತ್ತಿದ್ದ ಕಾರಣ ಥಳಿಸಿದ್ದೇನೆ ಎಂದು ಲಕ್ಷ್ಮಿ ಮಕ್ಕಳ ರಕ್ಷಣಾಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾಳೆ.ಮಗುವಿನ ಕುತ್ತಿಗೆ ಭಾಗ, ಎದೆ, ಹೊಟ್ಟೆ, ಬೆನ್ನು, ತೊಡೆ ಹಾಗೂ ಅದರ ಮೇಲ್ಭಾಗದ ಮೇಲೆ ಬರೆ ಹಾಕಿದ್ದಾಳೆ. ಈ ವಿಷಯ ಮಂಗಳವಾರ ರಾತ್ರಿ ಸಾರ್ವಜನಿಕರಿಂದ ಬಹಿರಂಗವಾಗಿದ್ದು, ಮಗುವಿನ ಮೇಲೆ ಹಲ್ಲೆ ಮಾಡಿದ ಲಕ್ಷ್ಮೀಯನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಘಟನೆ ಕುರಿತು ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಿ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನೆ ವಿವರಈ ಘಟನೆ ಬಗ್ಗೆ ಮಾಹಿತಿ ನೀಡಿದ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ, ಮಂಗಳವಾರ ರಾತ್ರಿ 10.30ಕ್ಕೆ ಮಗುವೊಂದರ ಮೇಲೆ ಹಲ್ಲೆಯಾಗಿದ್ದು ಮಗುವನ್ನು ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಮಗು ಹಠ ಮಾಡುತ್ತಿದ್ದ ಕಾರಣ ನಾನೇ ಥಳಿಸಿದ್ದೇನೆ ಎಂದು ತಾಯಿ ಲಕ್ಷ್ಮೀ ಹೇಳಿಕೊಂಡಿದ್ದಾಳೆ. ಥಳಿತಕ್ಕೆ ಒಳಗಾದ ಮಗು ಸೇರಿದಂತೆ ಲಕ್ಷ್ಮೀಗೆ ಇಬ್ಬರು ಮಕ್ಕಳು. ನಾಲ್ಕು ವರ್ಷಗಳಿಂದ ಲಕ್ಷ್ಮೀಯ ಪತಿ ದೂರವಿದ್ದು, ಮಕ್ಕಳಿಬ್ಬರು ಲಕ್ಷ್ಮೀಯ ತಂದೆ-ತಾಯಿ ಜೊತೆಗಿದ್ದರು. ಇತ್ತೀಚೆಗಷ್ಟೇ ತನ್ನ ತಂದೆ-ತಾಯಿ ಜೊತೆಗೂ ಜಗಳವಾಡಿ ಮಕ್ಕಳನ್ನು ಕರೆ ತಂದಿದ್ದಳು. ದೊಡ್ಡ ಮಗುವನ್ನು ಆರು ತಿಂಗಳಿಂದ ಶಾಲೆ ಸಹ ಬಿಡಿಸಿದ್ದಾಳೆ ಎಂಬ ಮಾಹಿತಿ ಇದೆ.ಸದ್ಯ ಹಲ್ಲೆಗೊಳಗಾದ ಮಗುವನ್ನು ಸಿವಿಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಕ್ಕಳ ಸಹಾಯವಾಣಿ ಮೂಲಕ ಹುಬ್ಬಳ್ಳಿಯ ಕೆಎಂಸಿಆರ್ಐ ತುರ್ತು ಘಟಕದಲ್ಲಿರಿಸಲಾಗಿದೆ. ಮಕ್ಕಳ ಅಜ್ಜ-ಅಜ್ಜಿ ಸಹ ಬಂದಿದ್ದು, ಮಕ್ಕಳ ಕಲ್ಯಾಣ ಸಮಿತಿ ಮೊರೆ ಹೋಗಲಿದ್ದಾರೆ. ಇದರೊಂದಿಗೆ ಮಕ್ಕಳ ರಕ್ಷಣಾಧಿಕಾರಿ ಘಟಕದಿಂದ ಪೊಲೀಸರಿಗೆ ಸ್ವಯಂ ಪ್ರೇರಣೆಯಿಂದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಿದ್ದೇವೆ ಎಂದು ದೀಪಾ ಜಾವೂರ ತಿಳಿಸಿದರು.