ಸಾರಾಂಶ
ಸಾವಯವ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ.ಕೆ.ಪಿ.ಬಸವರಾಜ್ ಕನ್ನಡಪ್ರಭ ವಾರ್ತೆ ಸಿರಿಗೆರೆ
ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಕಡೆಗೆ ದಾಪುಗಾಲು ಇಡಲು ತರಳಬಾಳು ಗ್ರಾಮೀಣ ಅಭಿವೃದ್ಧಿ ಪೌಂಡೇಶನ್ ಯೋಜನೆ ರೂಪಿಸುತ್ತಿದೆ. ಸರ್ಕಾರ, ಸಮುದಾಯ ಮತ್ತು ಹಲವು ಖಾಸಗಿ ಉದ್ಯಮ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಸಾಕಾರಗೊಳಿಸಲು ಮುಂದಡಿ ಇಡುತ್ತಿದೆ ಎಂದು ತರಳಬಾಳು ಗ್ರಾಮೀಣಾಭಿವೃದ್ಧಿ ಪೌಂಡೇಷನ್ ಕಾರ್ಯದರ್ಶಿ ಡಾ. ಕೆ.ಪಿ.ಬಸವರಾಜ್ ತಿಳಿಸಿದರು.ಭರಮಸಾಗರದಲ್ಲಿ ಆಯೋಜಿಸಲಾಗಿರುವ ಕೃಷಿ, ಯಂತ್ರೋಪಕರಣ, ಶಿಕ್ಷಣ, ಆರೋಗ್ಯ, ಸಾವಯವ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿವರಗಳನ್ನು ಹಂಚಿಕೊಂಡರು.
ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ 1982ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಆರಂಭದಲ್ಲಿ ಶಾಲಾ ಮಕ್ಕಳಲ್ಲಿ ಕೃಷಿ, ಪರಿಸರ ಸಂರಕ್ಷಣೆ, ಸಸಿ ಸಾಕಾಣಿಕೆ ಮುಂತಾದ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡಿದೆ. ಸಂಸ್ಥೆಯ ಚಟುವಟಿಕೆಗಳಿಗೆ ಇಂದಿರಾಪ್ರಿಯರ್ಶಿನಿ ಗೌರವ, ರಿಯೋ ಸಮ್ಮೇಳನದ ಪುರಸ್ಕಾರ ಹಾಗೂ ಹಲವು ಪ್ರತಿಷ್ಠಿತ ಗೌರವಗಳು ದೊರಕಿವೆ ಎಂದರು.ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ಸಾರ್ವಜನಿಕ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯರ ಆಶಯದಂತೆ ಸಹಯೋಗ ಆಡಳಿತ ಪದ್ಧತಿಯಲ್ಲಿ ಹಲವು ಚಟುವಟಿಕೆಗಳನ್ನು ರಾಜ್ಯದಾದ್ಯಂತ ವಿಸ್ತರಿಸಿದೆ. ಅದರ ಅಂಗವಾಗಿ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 17 ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಿದೆ. ರೈತರಿಗೆ ನೇರವಾಗಿ ಅನುಕೂಲ ಕಲ್ಪಿಸುವುದು, ರೈತರ ಉತ್ಪಾದನೆಗಳಿಗೆ ನಿಖರ ಬೆಲೆ ದೊರಕಿಸಿಕೊಡುವುದು, ಸಾವಯವ ಕೃಷಿ ಕಡೆಗೆ ಒಲವು ಬೆಳೆಸುವುದು, ರೈತರೇ ತಯಾರಿಸುವ ಸಿದ್ಧ ಆಹಾರ ಮತ್ತು ತಿನಿಸುಗಳಿಗೆ ಮಾರುಕಟ್ಟೆ ಒದಗಿಸುವುದು ಸೇರಿದಂತೆ ಚಟುವಟಿಕೆಯನ್ನು ವಿಸ್ತಾರಗೊಳಿಸುತ್ತಿದೆ ಎಂದರು.
ರಾಜ್ಯ ರೈತ ಸಂಘ ಹಾಗೂ ಸಾಧು ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು. ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬಸವನಗೌಡ, ಚೌಲಿಹಳ್ಳಿ ಶಶಿ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.