ಮೂಲ್ಕಿ ಕ್ಷೀರ ಸಾಗರ ನಿವಾಸಿಗಳಿಂದ ಮತದಾನ ಬಹಿಷ್ಕಾರ

| Published : Apr 09 2024, 12:46 AM IST

ಮೂಲ್ಕಿ ಕ್ಷೀರ ಸಾಗರ ನಿವಾಸಿಗಳಿಂದ ಮತದಾನ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡದಲ್ಲಿ ಮತದಾನ ಬಹಿಷ್ಕಾರ ಕೂಗು ಎದ್ದಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಮೂಲ್ಕಿಯ ಕ್ಷೀರಸಾಗರ ಹಿಂಭಾಗದ ರಸ್ತೆ ಹೊಂಡ ಗುಂಡಿಯಿಂದ ಅವ್ಯವಸ್ಥೆಗಳ ಆಗರವಾಗಿದ್ದು ಇಲ್ಲಿನ ಮತದಾರರು ಓಟು ಹಾಕುವುದಿಲ್ಲ ಎಂದು ಬ್ಯಾನರ್ ಅಳವಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಮೂಲ್ಕಿಯ ಕ್ಷೀರಸಾಗರ ಹಿಂಭಾಗದ ರಸ್ತೆ ಹೊಂಡ ಗುಂಡಿಯಿಂದ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಈ ಬಗ್ಗೆ ಅನೇಕ ಬಾರಿ ಕ್ಷೇತ್ರದ ಶಾಸಕರಿಗೆ, ಮೂಲ್ಕಿ ನಗರ ಪಂಚಾಯತಿಗೆ ಕಳೆದ ಆರು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ. ಈ ಬಾರಿ ಸ್ಥಳೀಯರು ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿ ಮತದಾನ ಬಹಿಷ್ಕಾರದ ಬಗ್ಗೆ ಬ್ಯಾನರ್‌ ಅಳವಡಿಸಿದ್ದಾರೆ.

ಏನಿದು ಸಮಸ್ಯೆ?:

ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಕ್ಷೀರಸಾಗರದ ಹಿಂಭಾಗದ ಸಂಪರ್ಕ ರಸ್ತೆ ಸುಮಾರು ಒಂದು ಕಿಲೋಮೀಟರ್ ಉದ್ದವಿದ್ದು ಈ ಭಾಗದಲ್ಲಿ ಸುಮಾರು 50-60 ಮನೆಗಳಿದ್ದು ಮನೆಗೆ ಹೋಗಲು ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಕಳೆದ ಆರು ವರ್ಷಗಳಿಂದ ಈ ಭಾಗದ ಜನ ರಸ್ತೆ ಡಾಂಬರೀಕರಣಕ್ಕೆ ಸ್ಥಳೀಯ ಆಡಳಿತಕ್ಕೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಇದುವರೆಗೂ ರಸ್ತೆ ದುರಸ್ತಿಯಾಗಿಲ್ಲ.

ಯಾವುದೇ ಪಕ್ಷದ ರಾಜಕೀಯ ನಾಯಕರಿಗೆ ನಮ್ಮ ವಠಾರಕ್ಕೆ ಮತಯಾಚನೆಗೆ ಪ್ರವೇಶವಿಲ್ಲ. ‘ಗೋ ಬ್ಯಾಕ್’ ಚುನಾವಣೆಗೆ ನಮ್ಮ ಬಹಿಷ್ಕಾರ ಎಂಬ ಬ್ಯಾನರನ್ನು ಸ್ಥಳೀಯ ನಿವಾಸಿಗಳು ಅಳವಡಿಸಿದ್ದಾರೆ.

-----------------------

ಮೂಲ್ಕಿಯ ಮಿಷನ್‌ ಬಂಗ್ಲೆ ಸಮೀಪ ಕ್ಷೀರ ಸಾಗರದ ಬದಿಯಲ್ಲಿ ಒಳ ರಸ್ತೆಯಲ್ಲಿ ಸುಮಾರು 50 ಮನೆಗಳಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಈ ಬಾರಿಯ ಲೋಕ ಸಭಾ ಚುನಾವಣೆಗೆ ಇಲ್ಲಿಯ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ.

-ಹೂಬರ್ಟ್ ಕೈರನ್ನ, ಆಟೋ ಚಾಲಕರು, ಸ್ಥಳೀಯ ನಿವಾಸಿ.