ಕನ್ನಡಪ್ರಭ ವಾರ್ತೆ ತುಮಕೂರು

ಸ್ಥಳೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದರೆ ಮಾತ್ರ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಸ್ಥಳೀಯ ಸಂಸ್ಕೃತಿಯೇ ಇತಿಹಾಸದ ಮೂಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವಾಸುದೇವ್ ಬಡಿಗೇರ್‌ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಆಯೋಜಿಸಿದ್ದ ‘ಸ್ಥಳೀಯ ಸಾಂಸ್ಕೃತಿಕ ಅಧ್ಯಯನ’ ಕುರಿತ ಉಪನ್ಯಾಸ ಸರಣಿಯ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿ ಮಾತನಾಡಿದರು.

ಇತಿಹಾಸದ ಸೊಗಡು ಗ್ರಾಮೀಣ ಪ್ರದೇಶದಲ್ಲಿ ಅಡಕವಾಗಿರುತ್ತದೆ. ಇತಿಹಾಸವೆಂದರೆ ಹಂಪಿ, ವಿಜಯನಗರ, ಬೇಲೂರು, ಹಳೆಬೀಡು, ಅಜಂತ, ಎಲ್ಲೋರ ಮಾತ್ರವಲ್ಲ. ಸ್ಥಳೀಯವಾಗಿಯೂ ಇತಿಹಾಸವಿರುತ್ತದೆ. ಅದನ್ನು ಸಾಧ್ಯವಾದಷ್ಟು ಅಧ್ಯಯನ ಮಾಡಬೇಕು. ಸ್ಥಳೀಯರು ಇತಿಹಾಸವನ್ನು ಒಟ್ಟಾರೆಯಾಗಿ ಹೇಳುತ್ತಾರೆ. ಅವುಗಳಿಗೆ ಸರಿಯಾದ ದಾಖಲೆಗಳನ್ನು ಹುಡುಕಿ ಕ್ರಮಬದ್ಧವಾಗಿ ಇತಿಹಾಸ ರಚಿಸಬೇಕು ಎಂದರು.

ತುಮಕೂರು ವಿಶ್ವವಿದ್ಯಾನಿಲಯ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ. ಕೊಟ್ರೇಶ್ ಮಾತನಾಡಿ, ಸ್ಥಳೀಯ ಇತಿಹಾಸವು ನಮ್ಮ ಬದುಕಿನೊಂದಿಗೆ ಒಡನಾಟವನ್ನು ಹೊಂದಿರುತ್ತದೆ. ನಮ್ಮ ಊರು, ತಾಲೂಕು, ಜಿಲ್ಲೆ, ರಾಜ್ಯದ ಸ್ಥಳೀಯ ಸಂಸ್ಕೃತಿಯ ಅಧ್ಯಯನ ನಡೆಸಬೇಕು ಎಂದು ಹೇಳಿದರು.


ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ. ಗಂಗಾಧರ್‌ ದೈವಘ್ನ, ತುಮಕೂರು ವಿಶ್ವವಿದ್ಯಾನಿಲಯ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಡಾ. ಚ್ಚಿಕ್ಕಣ್ಣ, ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಿಯಾಠಾಕೂರ್, ಡಾ. ಶ್ರೀನಿವಾಸ್ ಉಪಸ್ಥಿತರಿದ್ದರು.